ಪುತ್ತೂರು: ರಾಜ್ಯದಾದ್ಯಂತ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಏಕಾಏಕಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯನ್ನು ಬದಲಾವಣೆ ಮಾಡಿಸುವ ಮೂಲಕ ತಮ್ಮ ವಿರುದ್ಧ ಪಿತೂರಿ ನಡೆದಿತ್ತು. ಆದರೆ ನೂತನ ಅಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ನೀಡುವ ಮೂಲಕ ಪಕ್ಷದ ವರಿಷ್ಠರು ತಮ್ಮ ಸಂಘಟನಾ ಕೆಲಸಕ್ಕೆ ಹೊಸ ಚೈತನ್ಯ ನೀಡಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ತನ್ನ ಬ್ಲಾಕ್ ಅಧ್ಯಕ್ಷತೆಯನ್ನು ಬದಲಾವಣೆಗೊಳಿಸಿ ಫಝಲ್ ರಹೀಂ ಅವರನ್ನು ಆಯ್ಕೆ ಮಾಡಿರುವ ಹಿಂದೆ ಶಾಸಕಿಯವರ ಷಡ್ಯಂತ್ರವಿದೆ ಎಂದು ದೂರಿದರು.ನೂತನ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಪಕ್ಷದಿಂದ ಉಚ್ಚಾ ಟಿತರಾದ ವಾಣಿ ಶ್ರೀಧರ್, ಜಗದೀಶ್ ನೆಲ್ಲಿಕಟ್ಟೆ ಮತ್ತಿತರರು ಇದ್ದರು.
ಪಕ್ಷಕ್ಕೆ ಇಂತಹ ಹೀನಾಯ ಪರಿಸ್ಥಿತಿ ಎಂದೂ ಬಂದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಇದರಿಂದ ನೋವಾಗಿದೆ. ನಿಷ್ಠಾವಂತ ಕಾರ್ಯಕರ್ತರ ಒತ್ತಾಯದ ಮೇರೆಗೆ ತಾನು ವರಿಷ್ಠರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದ್ದು, ತಕ್ಷಣವೇ ನೂತನ ಅಧ್ಯಕ್ಷತೆಗೆ ತಡೆಯಾಜ್ಞೆ ನೀಡಿ ತಮ್ಮನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ವರಿಷ್ಠರು ಸೂಚಿಸಿದ್ದಾರೆ ಎಂದರು.
‘ಅಲ್ಪಸಂಖ್ಯಾತ ವ್ಯಕ್ತಿಯಾದ ಫಝಲ್ ರಹೀಂ ಅವರಿಗೆ ಅಧ್ಯಕ್ಷತೆಯ ಅಮಿಷ ತೋರಿಸಿ ಅವರನ್ನು ಬಲಿಪಶು ಮಾಡುವ ಮೂಲಕ ಶಾಸಕಿ ಮತ್ತು ಅವರ ತಂಡ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದೆ. ಬ್ಲಾಕ್ ಅಧ್ಯಕ್ಷನಾಗಿರುವ ನನ್ನ ಗಮನಕ್ಕೆ ಬಾರದೆ ಪಕ್ಷದ ಕಾರ್ಯಕರ್ತರಲ್ಲದ ಬ್ರೋಕರ್ಗಳು ಹಾಗೂ ಇನ್ನಿತರ ವ್ಯಕ್ತಿಗಳನ್ನು ಸರ್ಕಾರದ ನಾಮನಿರ್ದೇ ಶಿತರನ್ನಾಗಿ ನೇಮಕ ಮಾಡಲಾಗಿದೆ. ಇದನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ’ ಎಂದು ಅವರು ಹೇಳಿದರು.
ಪಕ್ಷದ ಪ್ರಮುಖರಾದ ರವಿಪ್ರಸಾದ್ ಶೆಟ್ಟಿ, ಶಿವನಾಥ ರೈ ಮೇಗಿನಗುತ್ತು, ಅಬ್ದುಲ್ ಖಾದರ್ ಮೇರ್ಲ, ಕಲಾವತಿ ಗೌಡ, ಸ್ವರ್ಣಲತಾ ಹೆಗ್ಡೆ, ಲ್ಯಾನ್ಸಿ ಮಸ್ಕರೇನಸ್, ಅನಿತಾ ಹೇಮನಾಥ ಶೆಟ್ಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಆರ್ಎಸ್ಎಸ್ ಶಾಸಕಿ!
ಶಕುಂತಳಾ ಶೆಟ್ಟಿ ಅವರು ಆರ್ಎಸ್ಎಸ್ ನವರು. ಕಾಂಗ್ರೆಸ್ ಪಕ್ಷದ 1 ರೂಪಾಯಿ ಸದಸ್ಯತ್ವ ವನ್ನು ಪಡೆಯದೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದು ಶಾಸಕರಾದ ಅವರ ಗೆಲುವಿಗೆ ನಾನು ಬ್ಲಾಕ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಶ್ರಮಿಸಿದ್ದೆ. ವಿಟ್ಲ ಉಪ್ಪಿನಂಗಡಿ ಬ್ಲಾಕ್ನಲ್ಲಿ ಅವರಿಗೆ 3 ಸಾವಿರ ಹಿನ್ನಡೆಯಾಗಿದ್ದರೆ, ಪುತ್ತೂರು ಬ್ಲಾಕ್ ನಲ್ಲಿ 6 ಸಾವಿರಕ್ಕೂ ಅಧಿಕ ಮುನ್ನಡೆ ಸಾಧಿಸಲು ನನ್ನ ಪ್ರಯತ್ನವೇ ಕಾರಣ. ಆದರೂ ಶಾಸಕಿಯಾದ ಬಳಿಕ ಅವರು ನನ್ನನ್ನು ಕಡೆಗಣಿಸಿದ್ದಾರೆ. ನನ್ನ ವಿರುದ್ಧ ಇನ್ನೊಬ್ಬ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಪಕ್ಷವನ್ನು ಒಡೆಯುವ ಕೆಲಸ ಮಾಡಿದ್ದಾರೆ.
–ಹೇಮನಾಥ ಶೆಟ್ಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.