ಚೆನ್ನೈ (ಪಿಟಿಐ): ಅಪರಾಧ ಪ್ರಕರಣಗಳಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡುವ ಸಂದರ್ಭದಲ್ಲಿ ಅದನ್ನು ವಿಚಾರಣಾಧೀನ ಕೋರ್ಟ್ಗಳು ‘ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗಿಲ್ಲ’ ಎಂಬ ಕಾರಣವನ್ನು ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ನಿರ್ದೇಶಿಸಿದೆ.
ಆರೋಪಿ ವಿರುದ್ಧ ಯಾರೂ ಪುರಾವೆ ಒದಗಿಸದ ಸಂದರ್ಭದಲ್ಲಿ ಆತ ನಿರ್ದೋಷಿ ಎಂದು ವಿಚಾರಣಾಧೀನ ಕೋರ್ಟ್ಗಳು ತೀರ್ಪು ನೀಡುತ್ತವೆ. ಹಾಗಾಗಿ ತೀರ್ಪು ನೀಡುವಾಗ ‘ಸಂಶಯಕ್ಕೆ ಆಸ್ಪದ ನೀಡುವಂತೆ ಸಾಬೀತಾಗಿಲ್ಲ’ ಅಥವಾ ‘ಸಂಶಯದ ಲಾಭ’ ಎಂಬ ವಿಶೇಷಣಗಳನ್ನು ಬಳಸದೆ, ಸರಳವಾಗಿ ಆತನನ್ನು ನಿರ್ದೋಷಿ ಎಂಬುದಾಗಿ ಪ್ರಕಟಿಸಬೇಕು ಎಂದು ನ್ಯಾಯಮೂರ್ತಿ ಎಸ್. ನಾಗಮುತ್ತು ಹೇಳಿದರು.
‘ನಿರ್ದೋಷಿ’ ಎಂದು ಪದಕ್ಕೆ ಹೆಚ್ಚುವರಿಯಾಗಿ ಯಾವ ಸಾಲು ಗಳನ್ನೂ ಸೇರಿಸದೆಯೇ ಆತನನ್ನು ಖುಲಾಸೆಗೊಳಿಸಬೇಕು ಎಂದು ಅವರು ಹೇಳಿದರು.
ಕಲಿವರದನ್ ಎಂಬ ಆರೋಪಿ ವಿರುದ್ಧದ ಪ್ರಕರಣದಲ್ಲಿ ಪನ್ರುಟ್ಟಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೀಡಿದ ‘ಸಂಶಯಕ್ಕೆ ಆಸ್ಪದ ನೀಡುವಂತೆ ಸಾಬೀತಾಗಿಲ್ಲ’ ಎಂಬ ತೀರ್ಪಿಗೆ ಸಂಬಂಧಿಸಿದಂತೆ ಅವರು ಈ ಸೂಚನೆ ನೀಡಿದರು.