ನವದೆಹಲಿ (ಪಿಟಿಐ): ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಭಾನುವಾರ ಬಿಡುಗಡೆಗೊಂಡಿದ್ದಾನೆ. ಇನ್ಮುಂದೆ ಪೊಲೀಸರ ರಕ್ಷಣೆ ಮುಂದುವರೆಸಲು ಆಗದ ಕಾರಣಕ್ಕೆ ಆತನನ್ನು ಸರ್ಕಾರೇತರ ಸಂಸ್ಥೆಗೆ (ಎನ್ಜಿಒ) ಒಪ್ಪಿಸಿ, ರಹಸ್ಯ ಸ್ಥಳಕ್ಕೆ ಕಳುಹಿಸಲಾಗಿದೆ.
‘ನಾವು ಆತನನ್ನು ಎನ್ಜಿಒಗೆ ಒಪ್ಪಿಸಿದ್ದೇವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಬಾಲಾಪರಾಧಿಯ ಬಿಡುಗಡೆಗೆ ವಿರೋಧಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಪಾಲಕರು ಕಳೆದೆರಡು ದಿನಗಳಿಂದ ಚಳವಳಿಕಾರರ ಜತೆಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆತನಿಗೆ ಗಲ್ಲು ವಿಧಿಸುವಂತೆ ಒತ್ತಾಯಿಸುತ್ತಿದ್ದರು.
2012ರ ಡಿಸೆಂಬರ್ 16 ರಂದು ಚಲಿಸುವ ಬಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಗೆ ದೇಶದ ಮೂಲೆಮೂಲೆಯಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು. ಜತೆಗೆ ನಿರ್ಭಯಾ ಪ್ರಕರಣ ಎಂದೇ ಖ್ಯಾತವಾಗಿತ್ತು.