ಬೆಂಗಳೂರು: ‘ಯಾರು ನೋವು ಅನುಭವಿಸುತ್ತಾರೋ ಅವರೆಲ್ಲರೂ ದಲಿತರು. ಸುಖವನ್ನು ಮಾತ್ರ ಅನುಭವಿಸುವವರು ಬಲಾಢ್ಯರು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಅಭಿಪ್ರಾಯಪಟ್ಟರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕವಿ ಸಿದ್ಧಲಿಂಗಯ್ಯ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು ಎಂಬ ಸಮಾಜದ ಹಿತಚಿಂತನೆಯಿಂದ ಸಿದ್ಧಲಿಂಗಯ್ಯ ಅವರು ನೊಂದವರ ಪರವಾಗಿ ಹೋರಾಡುತ್ತ ಬಂದಿದ್ದಾರೆ. ಅವರ ಕಾವ್ಯಗಳಲ್ಲಿ ಬುದ್ಧನ ಸ್ಪರ್ಶವಿದೆ’ ಎಂದು ಬಣ್ಣಿಸಿದರು.
ನಿವೃತ್ತ ಕೆಎಎಸ್ ಅಧಿಕಾರಿ ಮನು ಬಳಿಗಾರ್ ಮಾತನಾಡಿ, ‘ನಾಡಿನ ಶ್ರೇಷ್ಠಕವಿಗಳ ಸಾಲಿನಲ್ಲಿ ಮುಂಚೂಣಿ ಯಲ್ಲಿ ನಿಲ್ಲುವ ಸಿದ್ಧಲಿಂಗಯ್ಯ ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಸಹ ತಾತ್ವಿಕ ಚಿಂತನೆಗಳ ಚೌಕಟ್ಟಿನಲ್ಲಿ ಭ್ರಷ್ಟಾಚಾರ ರಹಿತವಾಗಿ ನಡೆಸಿದರು’ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ‘ಪ್ರತಿಷ್ಠಾನವು ಜನಪರ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ಸಿದ್ಧಲಿಂಗಯ್ಯ ಅವರ ಆದರ್ಶ, ತತ್ವ, ಎಲ್ಲ ಸಮುದಾಯಗಳ ಬಗ್ಗೆ ಇಟ್ಟಕೊಂಡಿದ್ದ ಪ್ರೀತಿಗೆ ಎಂದಿಗೂ ಧಕ್ಕೆಯಾಗಬಾರದು’ ಎಂದು ತಿಳಿಸಿದರು.
ಸಿದ್ಧಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷ ಮುದಲ್ ವಿಜಯ್, ‘ಸಿದ್ದಲಿಂಗಯ್ಯ ಅವರ ಬದುಕು, ಬರಹ, ಸಾಧನೆ ಮತ್ತು ವೈಚಾರಿಕತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜತೆಗೆ ಜನಪರ ಕಾಳಜಿಯ ಪ್ರಜ್ಞಾವಂತ ಬರಹಗಾರರು, ಕಲಾ ವಿದರು, ಸಮಾಜಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಮಾಜ ಮನಸ್ಕ ಗೆಳೆಯರು ಸೇರಿ ಈ ಪ್ರತಿಷ್ಠಾನ ಸ್ಥಾಪಿಸಿದ್ದೇವೆ’ ಎಂದರು.