ದೇವನಹಳ್ಳಿ : ರಾಜ್ಯ ಸರ್ಕಾರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಉಚಿತ ಮತ್ತು ಪ್ರೋತ್ಸಾಹದಾಯಕ ವಿವಿಧ ರೀತಿಯ ಯೋಜನೆಗಳನ್ನು ನೀಡುತ್ತಿದೆ ಪಾರಂಪರಿಕ ಮೂಲ ಕೃಷಿ ಕಸಬು ಉಳಿವಿಗೆ ರೈತರು ಮುಂದಾಗಬೇಕೆಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರೈತರಿಗೆ ಸಾವಯುವ ಗೊಬ್ಬರ ಬಿತ್ತನೆ ಬೀಜ ವಿತರಣೆ ಹಾಗೂ ಬೆಳೆ ವಿಮಾ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಗತ ವೈಭವದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅವಶ್ಯಕತೆ ಇದೆ ಮಣ್ಣಿನ ಫಲವತ್ತತೆ ಕಡಿಮೆಯಿಂದಾಗಿ ಇಳುವರಿ ಕುಂಠಿತವಾಗುತ್ತಿದೆ, ಹದಭರಿತ ಉಳುಮೆ ಮಾಡಿ ಸಾವಯುವ ಗೊಬ್ಬರ ಬಳಕೆ ಮಾಡಿದಾಗ ಮಣ್ಣಿನಲ್ಲಿ ತೇವಾಂಶದ ಜತೆಗೆ ಉತ್ತಮ ಇಳುವರಿ ಕಾಣಬಹುದು, ರೇಷ್ಮೆ ಮತ್ತು ಹೈನುಗಾರಿಕೆಗೆ ಅತಿ ಹೆಚ್ಚು ರೈತರು ಆಸಕ್ತಿ ವಹಿಸುತ್ತಿರುವುದರಿಂದ ಗುಳೆ ಹೋಗುವುದು ತಪ್ಪಿದೆ. ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಪ್ರೋತ್ಸಾಹದ ಜತೆಗೆ ಬೇಸಾಯದ ತಾಂತ್ರಿಕ ತರಬೇತಿಯು ಮುಖ್ಯ’ ಎಂದರು.
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಎಂ.ಎನ್.ಮಂಜುಳಾ ಮಾತನಾಡಿ, ಪ್ರಸ್ತುತ ತಾಲ್ಲೂಕಿನಲ್ಲಿ ಶೇಕಡ 40ರಷ್ಟು ಬಿತ್ತನೆಯಾಗಿದ್ದರೂ ತೊಗರಿ ಹೊರತುಪಡಿಸಿ ಉಳಿದ ಎಲ್ಲಾ ಬೆಳೆಗಳ ಬಿತ್ತನೆ ಪ್ರಸ್ತುತ ಸಕಾಲವಾಗಿದೆ. ಪ್ರಸ್ತುತ 125 ಎಕರೆಗೆ ರಾಗಿ ಬಿತ್ತನೆ ಮತ್ತು ಪ್ರತಿ ಎಕರೆಗೆ ಎರಡು ಚೀಲ ಸಾವಯುವ ಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಣೆಗೆ ಬೇವಿನ ಎಣ್ಣೆ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ತಾ.ಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಸಾಲದು ರೈತರ ಜಮೀನುಗಳಿಗೆ ಬಂದು ಕೃಷಿ ಚಟುವಟಿಕೆಯಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಗ್ರಾ.ಪಂ ಅಧ್ಯಕ್ಷ ದೇವರಾಜ್ ವಿ.ಎಸ್.ಎಸ್.ಎನ್ ಅಧ್ಯಕ್ಷ ಮಂಜು ನಾಥ್, ಗ್ರಾ.ಪಂ ಸದಸ್ಯ ಚಂದ್ರಶೇಖರ್, ಮುನಿಕೃಷ್ಣ, ಕೃಷಿ ಅಧಿಕಾರಿ ಮುಜಾಮುದ್ದಿನ್, ಪಿಡಿಓ ಬೀರೇಶ್, ಕಾರ್ಯದರ್ಶಿ ಸೀನಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.