ಬೆಂಗಳೂರು: ‘ಪಾರಂಪರಿಕ ಬಾಲಬ್ರೂಯಿ ಕಟ್ಟಡದ ಜಾಗದಲ್ಲಿ ಶಾಸಕರಿಗಾಗಿ ‘ಕಾನ್ಸ್ಟಿಟ್ಯೂಷನ್ ಕ್ಲಬ್’ನ್ನು ನಿರ್ಮಿಸಲು ನೀಡಿದ ಸೂಚನೆಯನ್ನು ಕೂಡಲೇ ಮುಖ್ಯಮಂತ್ರಿಗಳು ಹಿಂಪಡೆಯಬೇಕು’ ಎಂದು ಬಾಲಬ್ರೂಯಿ ಉಳಿಸಿ ಸಮಿತಿಯ ಸಂಯೋಜಕ ಶ್ರೀನಿವಾಸ ಜಿ. ಕಪ್ಪಣ್ಣ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಾಸಕರಿಗಾಗಿ ಕ್ಲಬ್ ನಿರ್ಮಿಸಲು ನಗರದಲ್ಲಿ ಹಲವಾರು ಸ್ಥಳಗಳಿವೆ. ಆದ್ದರಿಂದ ಮುಖ್ಯಮಂತ್ರಿಗಳು ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಮುಂದಾಗಬೇಕು. ಪಾರಂಪರಿಕ ಸ್ಥಳಗಳನ್ನು ಉಳಿಸಲು ಭಾನುವಾರ (ಅ.26) ಬಾಲಬ್ರೂಯಿ ಕಟ್ಟಡದ ಮುಂದೆ ಬಾಲಬ್ರೂಯಿಯಲ್ಲಿ ವಾಸವಿದ್ದು ರಾಜ್ಯವನ್ನು ಮುನ್ನಡೆಸಿದ ಮಹನಿಯರ ಹೆಸರಿನ ಫಲಕಗಳನ್ನು ಹಿಡಿದು ಮೌನ ಮೆರವಣಿಗೆ ನಡೆಸಲಾಗುವುದು ’ ಎಂದರು.
ಚಿತ್ರ ನಿರ್ದೇಶಕ ಬಿ.ಸುರೇಶ್ ‘ಬಾಲಬ್ರೂಯಿ ಕಟ್ಟಡದಲ್ಲಿ ರವೀಂದ್ರನಾಥ ಠಾಕೂರ್ ಸೇರಿದಂತೆ ರಾಜ್ಯದ ಹಲವು ಪ್ರಸಿದ್ಧ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿದ್ದಾರೆ. ಆದ್ದರಿಂದ ಅದರ ಇತಿಹಾಸ ಮುಂದಿನ ಯುವ ಪೀಳಿಗೆಗೆ ತಿಳಿಸಲು ಆ ಜಾಗದಲ್ಲಿ ಶಾಸಕರಿಗಾಗಿ ‘ಕಾನ್ಸ್ಟಿಟ್ಯೂಷನ್ ಕ್ಲಬ್’ ನಿರ್ಮಿಸಲು ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು’ ಎಂದರು.
ಸಮಿತಿಯ ಸಂಯೋಜಕ ಎಸ್.ಜಿ. ಗೋಪಾಲ್ ‘ಪಾರಂಪರಿಕ ಕಟ್ಟಡ, ಕೆರೆ, ಉದ್ಯಾನವನ ಇವೆಲ್ಲವೂ ನಗರದ ಸೌಂದರ್ಯ ಮಾತ್ರವಲ್ಲ, ನಾಗರಿಕರ ಆರೋಗ್ಯದ ದೃಷ್ಟಿಯಿಂದಲೂ ಅತ್ಯವಶ್ಯಕ. ಆದ್ದರಿಂದ ಸರ್ಕಾರ ಅವುಗಳ ರಕ್ಷಣೆಗೆ ಮುಂದಾಗಬೇಕು’ ಎಂದರು. ವಾಸ್ತುಶಿಲ್ಪಿ ನರೇಶ್ ವಿ.ನರಸಿಂಹನ್ ಮಾತನಾಡಿದರು.