ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಸಾವಯವ ಕೃಷಿಕ ಶಿವಾನಂದ ಮೂಲಿಮನಿ ಅವರ ರೋಗಬಾಧಿತ ಬಿಟಿ ಹತ್ತಿ ಹೊಲಕ್ಕೆ ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕ ಎಸ್.ಬಿ. ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹತ್ತಿಗೆ ರೋಗ ಬಂದು ಗಿಡದಲ್ಲಿನ ಮೋಪುಗಳು ಉದುರುತ್ತಿರುವ ಕುರಿತು ಜು.27ರಂದು ಪ್ರಜಾವಾಣಿಯಲ್ಲಿ ‘ಹತ್ತಿಗೆ ಹತ್ತು ಕುತ್ತು, ರೈತರಿಗೆ ತಪ್ಪದ ಆಪತ್ತು’ ಎಂಬ ಶಿರ್ಷಿಕೆಯಡಿ ಸಚಿತ್ರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರ ಹೊಲಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಈ ಬಾರಿ ತಾಲ್ಲೂಕಿನಲ್ಲಿ ರೋಗ ಬಾಧೆಯಿಂದಾಗಿ ಹೆಸರು ಬೆಳೆ ಹಾನಿಗೀಡಾಗಿದ್ದು ಈ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಪ್ರಸ್ತುತ ವರ್ಷ 14,525 ಹೆಕ್ಟೇರ್ನಲ್ಲಿ ರೈತರು ಹೆಸರು ಬಿತ್ತಿದ್ದು ರೋಗಗಳ ಕಾಟದಿಂದಾಗಿ ಇಳುವರಿಯಲ್ಲಿ ಬಹಳಷ್ಟು ಕುಸಿತವಾಗಿದೆ.
ಅದರಂತೆ ಪೋಷಕಾಂಶಗಳ ಕೊರತೆಯಿಂದಾಗಿ ಹತ್ತಿ ಗಿಡದಲ್ಲಿನ ಮೋಪುಗಳು ಉದುರಿ ಬೀಳುತ್ತಿವೆ. ಇದರ ಹತೋಟಿಗಾಗಿ ಕ್ರಮಕೈಗೊಳ್ಳುವುದರ ಕುರಿತು ರೈತರಿಗೆ ತಿಳಿಸಲಾಗಿದೆ ಎಂದ ಅವರು ಬಿಟಿ ಹತ್ತಿಗೆ 13 ಪೋಷಕಾಂಶಗಳ ಅಗತ್ಯ ಇದೆ. ಇದರಲ್ಲಿ ಯಾವುದಾದರೊಂದು ಪೋಷಕಾಂಶ ಕಡಿಮೆಯಾದರೂ ಅದಕ್ಕೆ ರೋಗ ಬರುತ್ತದೆ. ಈ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು.
ಹಿಂದೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ಯಾವೊಬ್ಬ ಅಧಿಕಾರಿಯೂ ರೈತರ ಹೊಲದತ್ತ ಸುಳಿಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿಬ್ಬಂದಿಗಳ ಕೊರತೆಯಿಂದಾಗಿ ಅಧಿಕಾರಿಗಳು ರೈತರ ಹೊಲಗಳಿಗೆ ಬರಲು ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
ಶಿಗ್ಲಿಯ ಭೂಮ್ಯಾಕಾಶ ನೈಸರ್ಗಿಕ ಕೃಷಿಕರ ಸಂಘದ ಅಧ್ಯಕ್ಷ ವಕೀಲ ಎಸ್.ಪಿ. ಬಳಿಗಾರ, ಕೃಷಿ ಸಹಾಯಕ ಸೋಮಣ್ಣ ಲಮಾಣಿ ಮತ್ತಿತರರು ಹಾಜರಿದ್ದರು.