ಚೆನ್ನೈ (ಪಿಟಿಐ): ಶಸ್ತ್ರಚಿಕಿತ್ಸೆಯಲ್ಲಿ ಆದ ಲೋಪದಿಂದ ಪ್ರಜ್ಞಾಶೂನ್ಯರಾಗಿರುವ ಪತ್ನಿಯ ದಯಾ ಮರಣಕ್ಕೆ ಅವಕಾಶ ನೀಡುವಂತೆ ಕೋರಿ 39 ವರ್ಷದ ವ್ಯಕ್ತಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕನ್ಯಾಕುಮಾರಿ ಜಿಲ್ಲೆಯ ಕೂಲಿಕಾರ್ಮಿಕ ಸಿ.ಸುಬ್ರಮಣಿಯನ್್ ಅವರ ಪತ್ನಿ ಸೀತಾಲಕ್ಷ್ಮಿ (34) ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕಳೆದ ವಾರ ದಾಖಲಿಸಲಾಗಿತ್ತು.
‘ಥೈರಾಯ್ಡ್್ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ಪತ್ನಿಯನ್ನು ಮಾ.3ರಂದು ತಾಲ್ಲೂಕು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಆಕೆ ಪ್ರಜ್ಞಾಶೂನ್ಯಳಾದಳು’ ಎಂದು ಸುಬ್ರಮಣಿಯನ್್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ನಂತರ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಿದೆ. ಈಗಾಗಲೇ ರೂ. 3ಲಕ್ಷ ಖರ್ಚು ಮಾಡಿದ್ದೇನೆ. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದೆ. ಈಗಲೂ ಆಕೆ ಕೋಮಾದಲ್ಲಿಯೇ ಇದ್ದಾಳೆ’ ಎಂದರು.
‘ಶಸ್ತ್ರಚಿಕಿತ್ಸೆ ವೇಳೆ ಆಕೆಯ ಕತ್ತಿನ ನರಗಳಿಗೆ ಹಾನಿಯಾಗಿದೆ ಎಂದು ಇಲ್ಲಿನ ವೈದ್ಯರು ಹೇಳಿದ್ದಾರೆ. ಅಲ್ಲದೇ ಆಕೆ ಚೇತರಿಸಿಕೊಳ್ಳುವುದು ಕೂಡ ಅನುಮಾನ ಎಂದಿದ್ದಾರೆ. ಆದ್ದರಿಂದ ನನ್ನ ಪತ್ನಿಗೆ ದಯಾ ಮರಣ ನೀಡುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ’ ಎಂದು ಹೇಳಿದರು.