ನವದೆಹಲಿ (ಐಎಎನ್ಎಸ್): ನೂತನ ಸರ್ಕಾರದ ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ, ವಿರೋಧ ಪಕ್ಷ ನಾಯಕತ್ವದ ವಿಷಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ತಿಳಿಸಿದ್ದಾರೆ.
‘ವಿರೋಧ ಪಕ್ಷದ ನಾಯಕತ್ವ ವಿಷಯವನ್ನು ಸಭೆಯಲ್ಲಿ ಯಾರೊಬ್ಬರೂ ಎತ್ತಲಿಲ್ಲ’ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ನಾಯ್ಡು ತಿಳಿಸಿದರು.
ಸೋಮವಾರ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು ಜುಲೈ ಎಂಟರಂದು ರೈಲ್ವೆ ಬಜೆಟ್, ಜುಲೈ 10ರಂದು ಸಾಮಾನ್ಯ ಬಜೆಟ್ ಮಂಡನೆ ನಿಗದಿಯಾಗಿದೆ.
ಸರ್ಕಾರ ಯಾವುದೇ ವಿಷಯಗಳ ಮುಕ್ತ ಚರ್ಚೆಗೆ ಸಿದ್ಧವಿದೆ ಎಂದು ನಾಯ್ಡು ಅವರು, ‘ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಪ್ರತಿಯೊಂದು ವಿಷಯಗಳನ್ನು ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಸಭೆಯಲ್ಲಿ ಭಾಗವಹಿಸಿದ್ದರು.