ಆನೇಕಲ್: ‘ಕೀಳರಿಮೆ ಬಿಟ್ಟು ಯಾವುದೇ ಉದ್ಯೋಗದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ದೊರೆಯುತ್ತದೆ’ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಮುಸ್ಲಿಂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಶ್ರಮ ಶಕ್ತಿ ಯೋಜನೆಯಡಿ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ₹ 10 ಸಾವಿರ ಅನುದಾನದಲ್ಲಿ ಆಸಕ್ತಿಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ಮಾಡಿದರು.
ಬೆಂಗಳೂರ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಮಾತನಾಡಿ, ‘ಆರು ತಿಂಗಳಲ್ಲಿ ಪ್ರಾರಂಭವಾದ ಮುಸ್ಲಿಂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಸಮುದಾಯದ ಬಡ ಜನತೆಯನ್ನು ಗುರುತಿಸಿ ಸರ್ಕಾರದ ವಿವಿಧ ಯೋಜನೆಗಳನ್ನು ಕ್ರೋಢೀಕರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಸರ್ಕಾರ ನೀಡುವ ಸೌಲಭ್ಯಗಳನ್ನು ಸಹಾಯಧನವನ್ನು ಬಳಸಿಕೊಂಡು ಕುಟುಂಬ ನಿರ್ವಹಣೆಯ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ಪುರಸಭಾ ಅಧ್ಯಕ್ಷ ಎನ್.ಎಸ್.ಅಶ್ವಥನಾರಾಯಣ, ಕೆಎಂಡಿಸಿ ಸೆಂಟ್ರಲ್ ಜಿಲ್ಲಾಧಿಕಾರಿ ಮಲ್ಲಿಕಾರ್ಜುನಪ್ಪ, ಎಂಡಿ.ಜಾಫರ್ ಅಹಮದ್ ಮಾತನಾಡಿದರು.
ಪುರಸಭಾ ಉಪಾಧ್ಯಕ್ಷ ಮುನಾವರ್, ಮುಸ್ಲಿಂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಪ್ಸರ್ ಅಲಿಖಾನ್, ಕಾರ್ಯದರ್ಶಿ ಸರ್ದಾರ್, ಪುರಸಭಾ ಸದಸ್ಯರಾದ ಪಿ.ಶಂಕರ್ ಕುಮಾರ್, ಮಲ್ಲಿಕಾರ್ಜುನ, ರಾಜರತ್ನಂ, ಮುಖಂಡರಾದ ಮಲ್ಲಿಕಾರ್ಜುನ, ವೆಂಕಟೇಶ್ ರೆಡ್ಡಿ, ಶ್ರೀನಿವಾಸ್, ಇಮ್ಮತಿಯಾಜ್,ಮೊಹಮದ್ ಅಜ್ಗರ್ ಪಾಷ, ರಹಮತ್ ಉಲ್ಲಾ ಹಾಜರಿದ್ದರು.