ಹಿರೇಕೆರೂರ: ಪಶ್ಚಿಮ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಬದಲಾವಣೆಯ ದೊಡ್ಡ ಅಲೆ ಶುರುವಾಗಿದೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.
ಪಟ್ಟಣದಲ್ಲಿ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ 26 ತಾಲ್ಲೂಕಿನ 4,250 ಶಾಲೆ, ಕಾಲೇಜುಗಳ 20 ಸಾವಿರ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ. ಶಿಕ್ಷಕರೊಂದಿಗೆ ಅವರ ಸಮಸ್ಯೆಗಳ ಈಡೇರಿಕೆಗೆ 36 ವರ್ಷಗಳಿಂದ ಪ್ರಾಮಾಣಿಕವಾಗಿ ಹೋರಾಟದಲ್ಲಿ ತೊಡಗಿದ್ದೇನೆ ಎಂದರು.
ಬಿಜೆಪಿಯವರು ಟಿಕೆಟ್ ನೀಡದೇ ಅನ್ಯಾಯ ಮಾಡಿದ್ದಾರೆ. ಆದರೆ ಶಿಕ್ಷಕರಿಂದ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.
ಕಾಲ್ಪನಿಕ ವೇತನ, ಅತಿಥಿ ಉಪನ್ಯಾಸಕರ ಸಮಸ್ಯೆ, ವೇತನ ತಾರತಮ್ಯ, ವೈದ್ಯಕೀಯ ಭತ್ಯೆಯಂತಹ ಹಲವಾರು ಸಮಸ್ಯೆಗಳು ಜೀವಂತವಾಗಿವೆ ಎಂದು ಅವರು ಹೇಳಿದರು.
ಶಿಕಕ್ಷರ ಸಮಸ್ಯೆಗಳನ್ನು ಅರಿಯದ ಮತ್ತು ಶಿಕ್ಷಕರ ಪರಿಚಯವೂ ಕೂಡ ಇಲ್ಲದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಸವರಾಜ ಹೊರಟ್ಟಿ ಅವರಿಗೆ ವಯಸ್ಸಾಗಿದೆ, ಅವರಿಗೆ ವಿಶ್ರಾಂತಿ ಬೇಕಿದೆ. ಹೀಗಾಗಿ, ಈ ಬಾರಿ ಅವರಿಗೆ ವಿಶ್ರಾಂತಿ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದರು.
ಪಿ.ಎನ್.ಮೇಗಳಮನಿ, ಆರ್.ಎಸ್. ಪಾಟೀಲ, ಆರ್.ಎಸ್.ಕಾಕೋಳ, ನೆಹರೂ ಕೊರಚರ, ದೇವರಾಜ ಹಂಚಿನಮನಿ, ಬಿ.ಮಹಾತೇಶಪ್ಪ, ಎಸ್.ಬಿ.ಪಾಟೀಲ, ಜಯಪ್ಪ ಸೋಮಸಾಗರ ಇತರರಿದ್ದರು.