ರೋಮ್ (ಎಎಫ್ಪಿ): ‘ಐ.ಎಸ್ ಉಗ್ರರ ಮೇಲೆ ಬಾಂಬ್ ಎಸೆಯುವುದನ್ನು ಬಿಟ್ಟು ಪುಸ್ತಕಗಳನ್ನು ಎಸೆಯಿರಿ’ ಎಂದು ಇರಾನ್ನ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಶಿರಿನ್ ಎಬಾದಿ ಸಲಹೆ ಮಾಡಿದ್ದಾರೆ.
ಐ.ಎಸ್ ಕೂಡ ಅಲ್ ಕೈದಾದ ಮತ್ತೊಂದು ರೂಪ. ಬಾಂಬ್ ಅಥವಾ ಬಂದೂಕಿನ ನಳಿಕೆ ಮೂಲಕ ಇವರನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಶಿರಿನ್ ಅಭಿಪ್ರಾಯಪಟ್ಟಿದ್ದಾರೆ.
ಬಾಂಬ್ ಹಾಕಿದರೆ ಭಯೋತ್ಪಾದನೆಯ ರೆಂಬೆ ಕೊಂಬೆಗಳು ನಾಶವಾಗಬಹುದೇ ಹೊರತು, ಬೇರು ನಾಶವಾಗದು. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಬೇಕು. ಅಸಮಾನತೆ ಹಾಗೂ ಅನಕ್ಷರತೆ ಭಯೋತ್ಪಾದನೆಯ ಆ ಬುಡಗಳು ಎಂದು ಅವರು ವಿಶ್ಲೇಷಿಸಿದ್ದಾರೆ.
‘ಉಗ್ರರ ಹುಟ್ಟಡಗಿಸಲು ಶಿಕ್ಷಣದ ಬೀಜ ಬಿತ್ತಬೇಕು. ಶಾಲೆಗಳನ್ನು ನಿರ್ಮಿಸಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಉತ್ತಮ ಪುಸ್ತಕಗಳನ್ನು ಒದಗಿಸಬೇಕು. ಹಾಗಾದಾಗ ಮಾತ್ರ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿರ್ನಾಮ ಮಾಡಬಹುದು’ ಎಂದು ಶಿರಿನ್ ಸಲಹೆ ನೀಡಿದ್ದಾರೆ.