ನೈನಿತಾಲ್(ಪಿಟಿಐ): ‘ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟದ ಸಚಿವರ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರಲಿಲ್ಲ ಎಂಬ ಸಂಜಯ್ ಬಾರು ಅವರ ಆರೋಪ ಆಧಾರ ರಹಿತ ಮತ್ತು ಪ್ರಧಾನಿಯವರ ಘನತೆಗೆ ಕುಂದು ತರುವ ಪ್ರಯತ್ನವಾಗಿದೆ’ ಎಂದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಸಿಎನ್ಆರ್ ರಾವ್ ಹೇಳಿದ್ದಾರೆ.
ಬಾರು ಅವರ ಪುಸ್ತಕ ಪ್ರಕಟವಾದ ಸಂದರ್ಭವನ್ನು ಪ್ರಶ್ನಿಸಿರುವ ಪ್ರೊ. ರಾವ್, ‘ಚುನಾವಣೆ ಸಮಯದಲ್ಲಿಯೇ ಈ ಪುಸ್ತಕ ಹೊರಬಂದಿರುವುದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗಿದೆ’ ಎಂದಿದ್ದಾರೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆ ‘ಪಹಾರ್’ ಭಾನುವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮನಮೋಹನ್ ಸಿಂಗ್ ಒಬ್ಬ ದುರ್ಬಲ ಪ್ರಧಾನಿ.
ತಮ್ಮ ಸಚಿವರ ಮೇಲೆ ನಿಯಂತ್ರಣ ಹೊಂದಿರಲಿಲ್ಲ ಎಂಬ ಆರೋಪಗಳೆಲ್ಲ ಸಂಪೂರ್ಣ ಆಧಾರರಹಿತವಾದದ್ದು. ಈ ಪುಸ್ತಕವು ರಾಜಕೀಯ ಲಾಭಕ್ಕಾಗಿ ಸಿಂಗ್ ಅವರ ಘನತೆಗೆ ಹಾನಿಯುಂಟುಮಾಡುವ ಪ್ರಯತ್ನವಾಗಿದೆ’ ಎಂದು ಅವರು ಹೇಳಿದ್ದಾರೆ.