ಶಿವಮೊಗ್ಗ: ‘ಬಿಸಿಲು ಕುದುರೆ’ ಚಿತ್ರದ ಸಹ ನಟಿ ರಜನಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಜಿಲ್ಲಾ ಕಾಂಗ್ರೆಸ್ ಮುಖಂಡ ಕುಮಾರ್ (ಫ್ಲವರ್ ಕುಮಾರ್) ವಿರುದ್ಧ ಇಲ್ಲಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿನಿಮಾದ ಮುಹೂರ್ತ ಮೇ 21ರಂದು ನಡೆದಿತ್ತು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಚಿತ್ರಕ್ಕೆ ಚಾಲನೆ ನೀಡಿದ್ದರು. ಹಾಸನ ಮೂಲದ ಸಹ ನಟಿ ನಗರದ ಗೋಪಾಳ ಬಡಾವಣೆಯ ಜಡ್ಜ್ ಕಾಲೊನಿಯ ಮನೆಯಲ್ಲಿ ಉಳಿದುಕೊಂಡಿದ್ದರು.
‘ಚಿತ್ರದ ಮುಹೂರ್ತದ ನಂತರ ನಾನು ಉಳಿದುಕೊಂಡಿದ್ದ ಕೊಠಡಿಗೆ ಆಗಮಿಸಿದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕುಮಾರ್ ಸಿನಿಮಾದಲ್ಲಿ ಒಳ್ಳೆಯ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದರು. ಅದಕ್ಕೆ ನಾನು ನಿರಾಕ ರಿಸಿದೆ. ನಂತರ ನನ್ನನ್ನು ಬಳಸಿಕೊಳ್ಳಲು ಯತ್ನಿಸಿದರು. ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಪತಿಗೆ ವಿಷಯ ತಿಳಿಸಿದೆ. ಪತಿಯ ಸೂಚನೆ ಮೇಲೆ ದೂರು ನೀಡುತ್ತಿದ್ದೇನೆ’ ಎಂದು ಸಹ ನಟಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಿಸಿಲು ಕುದುರೆ’ ಚಿತ್ರದಲ್ಲಿ ನಾಯಕಿ ಸ್ನೇಹಿತೆಯ ಪಾತ್ರದಲ್ಲಿ ರಜನಿ ನಟಿಸು ತ್ತಿದ್ದಾರೆ. ಘಟನೆಯ ನಂತರ ಸಹ ನಟಿಯ ಪತಿಗೂ ಕುಮಾರ್ ಕೊಲೆ ಬೆದರಿಕೆ ಹಾಕಿದ್ದು, ಅತ್ಯಾಚಾರ ಯತ್ನದ ಜತೆ, ಕೊಲೆ ಬೆದರಿಕೆ ದೂರೂ ದಾಖ ಲಾಗಿದೆ.
ಈ ಹಿಂದೆಯೂ ಕುಮಾರ್ ವಿರುದ್ಧ ಬಿಎಸ್ಎನ್ಎಲ್ ಗುತ್ತಿಗೆದಾರರನ್ನು ಅಪಹರಿಸಿದ ಪ್ರಕರಣ ದಾಖಲಾಗಿತ್ತು.
ಪ್ರತಿದೂರು ದಾಖಲು: ‘ಸಹ ನಟಿ ಹಣ ಕ್ಕಾಗಿ ನನಗೆ ಬ್ಲ್ಯಾಕ್ಮೇಲ್ ಮಾಡಿ ದ್ದರು. ಹಣ ನೀಡಲು ಒಪ್ಪದಿದ್ದಾಗ ಈ ರೀತಿ ನನ್ನ ವಿರುದ್ಧ ದೂರು ನೀಡಿದ್ದಾರೆ’ ಎಂದು ಚಿತ್ರ ನಿರ್ಮಾಪಕ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಬಳಿ ಪ್ರತಿದೂರು ದಾಖಲಿಸಿದ್ದಾರೆ.
ಬಿಜೆಪಿ ಪ್ರತಿಭಟನೆ: ಸಹ ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು. ನ್ಯಾಯ
ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.