ಗುಂಡ್ಲುಪೇಟೆ: ‘ಬುದ್ಧ, ಬಸವಣ್ಣ ಅವರ ವಿಚಾರಧಾರೆಗಳ ಪ್ರಭಾವದಿಂದ ಭಾರತೀಯ ಸಂವಿಧಾನದ ರಚನೆಯಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಅಭಿಪ್ರಾಯಪಟ್ಟರು. ಕಸಾಪ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವತೆಯ ಮೂರ್ತಿ ಅಂಬೇಡ್ಕರ್ ಅವರಿಗೆ ದೊರೆತ ಬಿರುದುಗಳು ಜನಮಾನಸದಿಂದ ಬಂದಂಥವು. ವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದ ಅವರು ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು’ ಎಂದರು. ಮುಖಂಡ ಜಿ.ಡಿ. ದೊಡ್ಡಯ್ಯ ಮಾತನಾಡಿ, ಮಾನವೀಯತೆಯನ್ನು ಮೈಗೂಡಿಸಿಕೊಳ್ಳಲು ನಾವು ಬಾಬಾಸಾಹೇಬರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಪಿ.ಸಿ. ರಾಜಶೇಖರ್, ಗು.ಚಿ. ರಮೇಶ್, ರಂಗಕರ್ಮಿ ಸುರೇಶ್, ಉದ್ಯಮಿ ಸಂಜಯ್, ಮುಖಂಡ ದೇವರಾಜ ಬಹುಜನ, ಕಾಂತರಾಜು ಅಸುರ, ಪತ್ರಕರ್ತ ಗೋವಿಂದರಾಜು, ದ.ಸಂ.ಸ. ಸಂಚಾಲಕ ರಂಗಸ್ವಾಮಿ ಹಾಜರಿದ್ದರು.
ಪಟ್ಟಣದ ವಿವಿಧೆಡೆ ಅಂಬೇಡ್ಕರ್ ಸ್ಮರಣೆ
ಹನೂರು: ಪಟ್ಟಣದ ವಿವಿಧ ಕಡೆಗಳಲ್ಲಿ ಸೋಮವಾರ ಡಾ.ಅಂಬೇಡ್ಕರ್ ಅವರ 123ನೇ ಜಯಂತಿ ಆಚರಣೆ ನಡೆಯಿತು.
ಸಮುದಾಯ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅಂಬೇಡ್ಕರ್ ಸಂಘದ ಅಧ್ಯಕ್ಷ ಕಿರಣ್, ಮುಖಂಡರಾದ ಹಾ.ಮ. ನಾಗರಾಜು, ಮಾದೇವ, ಪ್ರಸನ್ನಕುಮಾರ್, ವೆಂಕಟೇಶ್, ರವಿ ಇದ್ದರು. ನಂತರ ಮೆರವಣಿಗೆ ನಡೆಸಲಾಯಿತು.
ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಶಿವಲಿಂಗಯ್ಯ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ ಗಿರೀಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆರೋಗ್ಯಾಧಿಕಾರಿ ಚೇತನ್ಕುಮಾರ್, ಸಹಾಯಕ ಎಂಜಿನಿಯರ್ ಚಲುವರಾಜು ಮತ್ತು ಸಿಬ್ಬಂದಿ ಇದ್ದರು.