ಮಹಿಳೆಯರ ಮೇಲಿನ ಅತ್ಯಾಚಾರ ಎಂಬ ಬೆನ್ನುಬಿಡದ ‘ಬೇತಾಳ’ದ ಕಣ್ಣು ನಮ್ಮ ರಾಜ್ಯದ ಮೇಲೆ ಬಿದ್ದಿದೆ. ಅತ್ಯಾಚಾರ ಪ್ರಕರಣಗಳಿಂದ ಅಪಖ್ಯಾತಿಗೆ ಒಳಗಾದ ರಾಜ್ಯಗಳ ಪೈಕಿ ಮೊನ್ನೆ ಉತ್ತರ ಪ್ರದೇಶ, ಈಗ ಕರ್ನಾಟಕ. ಹಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಇದೇ ಸುದ್ದಿಯನ್ನು ನಿರಂತರವಾಗಿ ಪ್ರಸಾರ ಮಾಡುತ್ತಾ ರಾಜ್ಯದ ಮಾನವನ್ನು ಹರಾಜು ಹಾಕುತ್ತಿವೆ. ಇಷ್ಟಾಗಿಯೂ ಒಂದಾದ ಮೇಲೆ ಒಂದರಂತೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದರ ಬಗ್ಗೆ ವಿಧಾನಮಂಡಲದಲ್ಲೂ ಚರ್ಚೆ ನಡೆದಿದೆ.
ಈ ಬೆಳವಣಿಗೆಗಳ ಪರಿಣಾಮವಾಗಿ ಸರ್ಕಾರ ಪೋಲಿಸ್ ಇಲಾಖೆಗೆ ‘ಸರ್ಜರಿ’ ಮಾಡಿದೆ. ಗೂಂಡಾ ಕಾಯ್ದೆ ಬಳಸುವ ಎಚ್ಚರಿಕೆಯನ್ನೂ ನೀಡಿದೆ. ಆದರೂ ‘ಭಂಡ’ರ ಗುಂಡಿಗೆ ನಡುಗಿಲ್ಲ. ಈ ಹೀನ ಕೃತ್ಯ ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಗಳು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.
ಇದರೊಂದಿಗೆ ಮಹಿಳೆಯರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡುವ ಕುರಿತು ಯೋಚಿಸಬೇಕು. ಸಾಧ್ಯವಾದರೆ, ಈ ಸಲುವಾಗಿ ಶಿಬಿರಗಳನ್ನು ಆಯೋಜಿಸಬೇಕು.
–ಸುದರ್ಶನ ಎಚ್. ಯಡಹಳ್ಳಿ
ಬೆನಕಟ್ಟಿ (ಬಾಗಲಕೋಟೆ)