ಲಖನೌ (ಪಿಟಿಐ): ಮದರಸಾಗಳು ‘ಭಯೋತ್ಪಾದನೆಯ ಪಾಠ’ ಮಾಡುತ್ತಿವೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ.
‘ಮದರಸಾಗಳು ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹಾಗೂ ಜಿಹಾದಿಗಳನ್ನಾಗಿ ಮಾಡುತ್ತಿವೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದದ್ದು’ ಎಂದು ಉತ್ತರಪ್ರದೇಶದ ಉನ್ನಾವೊ ಕ್ಷೇತ್ರದ ಸಂಸದ ಹೇಳಿದ್ದಾರೆ.
‘ಯಾವುದಾದರೂ ಒಂದು ಮದರಸಾದಲ್ಲಿ ತ್ರಿವರ್ಣ ಧ್ವಜ ಹಾರಾಡುವುದನ್ನು ತೋರಿಸಿ. ಆಗಸ್ಟ್ ೧೫ ಹಾಗೂ ಜನವರಿ ೨೬ರಂದು ಕೂಡ ಇಲ್ಲಿ ರಾಷ್ಟ್ರಧ್ವಜ ಕಂಡುಬರುವುದಿಲ್ಲ. ನಮ್ಮಲ್ಲಿ ಅನುದಾನರಹಿತ ಶಾಲೆಗಳೇ ಹೆಚ್ಚಿವೆ. ಆದರೆ ಮದರಸಾಗಳಿಗೆ ಅನುದಾನ ಸಿಗುತ್ತಿದೆ. ಇಂಥ ಸಂಸ್ಥೆಗಳಿಗೂ, ರಾಷ್ಟ್ರೀಯತೆಗೂ ಸಂಬಂಧವೇ ಇಲ್ಲ’ ಎಂದೂ ಅವರು ಟೀಕಿಸಿದ್ದಾರೆ. ಸಾಕ್ಷಿ ಮಹಾರಾಜ್ ‘ದ್ವೇಷ ಭಾಷಣ’ವನ್ನು ಸಮಾಜವಾದಿ ಪಕ್ಷ ತೀವ್ರವಾಗಿ ಖಂಡಿಸಿದೆ.