ಗ್ರೇಟರ್ನೊಯಿಡಾ, ಉತ್ತರ ಪ್ರದೇಶ (ಪಿಟಿಐ): ಪಾಕಿಸ್ತಾನ ಜತೆಗಿನ 2003ರ ಕದನ ವಿರಾಮ ಒಪ್ಪಂದವನ್ನು ಭಾರತವು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಎಂದಿಗೂ ಉಲ್ಲಂಘಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ತಿಳಿಸಿದ್ದಾರೆ.
ಇಂಡೋ–ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ 53ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅವರು ಸೂರಜಪುರದಲ್ಲಿ ಮಾತನಾಡಿದರು.
‘ಭಾರತವು ಎಂದಿಗೂ ಕದನ ವಿರಾಮ ಉಲ್ಲಂಘಿಸುವುದಿಲ್ಲ. ಇದು ಶಾಂತಿಯಲ್ಲಿ ನಂಬಿಕೆ ಇಡುವ ರಾಷ್ಟ್ರವಾಗಿದೆ’ ಎಂದು ಪಾಕ್ ಮಾಡಿರುವ ಕದನ ವಿರಾಮ ಉಲ್ಲಂಘನೆ ಆರೋಪಗಳಿಗೆ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
‘ಕಳೆದೆರಡು ದಿನಗಳಲ್ಲಿ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘನೆ ಮಾಡಿದೆ. ದೀಪಾವಳಿಯಂತಹ ಹಬ್ಬದ ದಿನವೂ ಅದು ಬಿಡಲಿಲ್ಲ’ ಎಂದು ಅವರು ಟೀಕಿಸಿದ್ದಾರೆ.
ಪಾಕಿಸ್ತಾನವು ಗುರುವಾರ ಮೂರು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.