ಮುಂಡರಗಿ: ಅಂಗವಿಕಲ ಮಕ್ಕಳು ಸೇರಿದಂತೆ ಶಾಲೆಗೆ ದಾಖಲಾಗುವ ಎಲ್ಲ ಮಕ್ಕಳನ್ನು ಶಿಕ್ಷಕರು ಸಮಾನತೆಯಿಂದ ಕಾಣಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಹಿರಿಯ ಅಧಿಕಾರಿ ಶಂಕರ ಹಡಗಲಿ ಹೇಳಿದರು.
ಸ್ಥಳೀಯ ಬಿಆರ್ಸಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರವು ಎಲ್ಲ ಮಕ್ಕಳಲ್ಲಿ ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಸಮವಸ್ತ್ರ, ಬಿಸಿಯೂಟ, ಬೈಸಿಕಲ್, ಪಠ್ಯಪುಸ್ತಕಗಳನ್ನು ವಿತರಿಸುವುದರ ಜೊತೆಗೆ ಮಕ್ಕಳಲ್ಲಿ ಭೇದ ಭಾವ ಮೂಡಬಾರದು ಎನ್ನುವ ಕಾರಣದಿಂದ ಹಲವಾರು ಸಮಾನಾಂತರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಅಂಗವಿಕಲ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಇತರೆ ಮಕ್ಕಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತಾರೆ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದ್ದು, ಶಿಕ್ಷಕರು ವಿಶೇಷ ಕಾಳಜಿ ವಹಿಸಿ ತುಂಬಾ ತಾಳ್ಮೆ ಹೊಂದಿರಬೇಕಾಗುತ್ತದೆ. ಅಂಗವಿಕಲರ ಸಾಮರ್ಥ್ಯವನ್ನು ಅರಿತು ಅವರ ಮನ ಮುಟ್ಟುವಂತೆ ಶಿಕ್ಷಕರು ಬೋಧಿಸಬೇಕಾಗುತ್ತದೆ ಎಂದು ತಿಳಿಸಿದರು.
ಅಂಗವಿಕಲ ಮಕ್ಕಳನ್ನು ಕೀಳರಿಮೆಯಿಂದ ಕಾಣದೆ ಸದಾ ಅವರನ್ನು ಧನಾತ್ಮಕ ಚಿಂತನೆಗೆ ಒಳಪಡಿಸಬೇಕು. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಅವರನ್ನು ಸಮಾಜದ ಮಖ್ಯವಾಹಿನಿಗೆ ಕರೆತರಲು ಪ್ರಯತ್ನಸಿಬೇಕು ಎಂದು ಅವರು ಸಲಹೆ ನೀಡಿದರು.
ವಿಶೇಷ ಸಂಪನ್ಮೂಲ ವ್ಯಕ್ತಿ ಡಾ.ಕೆ.ಕೊಟ್ಟೂರಯ್ಯ ಮಾತನಾಡಿ, ಅಂಗವಿಕಲ ಮಕ್ಕಳಿಗೆ ವಿಶೇಷ ಬೋಧನೆ ಮಾಡಬೇಕು ಎನ್ನುವ ಕಾರಣದಿಂದ ಸರ್ಕಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೆಲವು ಆಸಕ್ತಯುಳ್ಳ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡುತ್ತದೆ. ತರಬೇತಿ ಪೂರೈಸುವ ಶಿಕ್ಷಕರು ತಮ್ಮ ಶಾಲೆಗಳಲ್ಲಿರುವ ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲು
ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಶಿಂಗಟಾಲೂರ ವೀರಭದ್ರೇಶ್ವರ ಸರ್ಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಇನಾಮತಿ, ಬಿಆರ್ಪಿಯ ಪಿ.ಆರ್.ಮುನುವಳ್ಳಿ, ವಾಣಿಶ್ರೀ, ಶಶಿಧರ ಚಳಗೇರಿ, ದೊಡ್ಡಮನಿ ಹಾಜರಿದ್ದರು.