ಕೆಂಗೇರಿ: ‘ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅನಾಚಾರ, ದುರಾಚಾರಗಳಿಂದಾಗಿ ಶೈಕ್ಷಣಿಕ ವ್ಯವಸ್ಥೆಯ ಘನತೆಗೆ ಕುಂದುಬಂದಿದೆ. ಮಾಧ್ಯಮಗಳಲ್ಲಿ ಅಸಹ್ಯಕರವಾದ, ಉದ್ರೇಕ, ಪ್ರಚೋದಕ ಕಾರ್ಯಕ್ರಮಗಳಿಂದಾಗಿ ನಮ್ಮ ಮಕ್ಕಳ ಕಲಿಕೆಯಲ್ಲಿ ನೈತಿಕ ಶಿಕ್ಷಣ ಇಲ್ಲವಾಗಿದೆ. ಇದು ಒಂದು ರೀತಿಯ ಸಾಂಸ್ಕೃತಿಕ ಹಲ್ಲೆ’ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ನಡೆಸಿದ ಮಾಹಿತಿ ಮನರಂಜನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೆಲ ದಶಕಗಳ ಹಿಂದಿನ ಶಾಲಾ ವ್ಯವಸ್ಥೆಗಳಲ್ಲಿ ಮಾನವೀಯತೆಯಿತ್ತು. ಆದರೆ, ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ರೀತಿ- ನೀತಿ ಇಲ್ಲದಿರುವುದರಿಂದ ನಮ್ಮತನವನ್ನು ಕಳೆದುಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಜನಗಳಿಗೆ ತಿಳಿಸುವ ಪ್ರಯುಕ್ತ ವಾರ್ತಾ ಇಲಾಖೆಯವರ ಈ ಕಾರ್ಯಕ್ರಮಗಳು ಉಪಯುಕ್ತವಾಗಿವೆ’ ಎಂದರು.
ಈ ಸಂದರ್ಭದಲ್ಲಿ ಮಕ್ಕಳು ಜನಪದ ಕಲಾಪ್ರದರ್ಶನ ಹಾಗೂ ತೊಗಲುಬೊಂಬೆ ನಾಟಕಗಳನ್ನು ಪ್ರದರ್ಶಿಸಿದರು.