ಬೆಂಗಳೂರು: ಮನೆಬಿಟ್ಟು ಬರುವ ಮಕ್ಕಳನ್ನು ರಕ್ಷಿಸುವುದು ಎಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣವರ ಹೇಳಿದರು.
ಯಶವಂತಪುರದಲ್ಲಿ ‘ಸಾಥಿ’ ಸಂಸ್ಥೆ ಸೋಮವಾರ ಆಯೋಜಿಸಿದ್ದ ಮನೆಬಿಟ್ಟು ಬಂದ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಸಂಪತ್ತು ಎಂದು ಹೇಳುತ್ತೇವೆ. ಪೋಷಕರಿಂದಲೇ ತೊಂದರೆ ಅನುಭವಿಸಿ ಅನೇಕ ಮಕ್ಕಳು ಮನೆಬಿಟ್ಟು ಬರುತ್ತಿದ್ದಾರೆ.ಆದರೆ ಎಲ್ಲ ಮಕ್ಕಳೂ ಭಾಗ್ಯವಂತರಾಗಿರುವುದಿಲ್ಲ. ಮಕ್ಕಳ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಮಕ್ಕಳು ಮನೆಬಿಟ್ಟು ಹೋಗಿ ಸಮಾಜಘಾತುಕರಾಗಿ ಬೆಳೆ-ಯುವ ಅಪಾಯವಿದೆ ಎಂದರು.
‘ಸಾಥಿ’ಯಂಥ ಸ್ವಯಂಸೇವಾ ಸಂಸ್ಥೆಗಳ ಜೊತೆ ಸಾರ್ವಜನಿಕರು ಕೈಜೋಡಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
‘ಸಾಥಿ’ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ‘ನಗರದ ರೈಲ್ವೆ ನಿಲ್ದಾಣಗಳಲ್ಲದೆ ರಾಜ್ಯದ ಉಳಿದ ರೈಲ್ವೆ ನಿಲ್ದಾಣಗಳಲ್ಲಿಯೂ ಎಂಟರಿಂದ ಹತ್ತು ವಯಸ್ಸಿನ ಮಕ್ಕಳು ಕಾಣಸಿಗುತ್ತಾರೆ. ಪ್ರತಿದಿನ ಸರಾಸರಿ ಹುಬ್ಬಳ್ಳಿಯಲ್ಲಿ 5, ಅರಸೀಕೆರೆಯಲ್ಲಿ 8 ಮಕ್ಕಳು ಪತ್ತೆಯಾಗುತ್ತಿದ್ದಾರೆ. ಎರಡು ವರ್ಷಗಳಲ್ಲಿ 10 ಸಾವಿರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಎಂದರು.
ಆಂಧ್ರಪ್ರದೇಶ, ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಜಾರ್ಖಂಡ್ನಿಂದ ಬಂದ ಪೋಷಕರಿಗೆ ಮಕ್ಕಳನ್ನು
ಒಪ್ಪಿಸಲಾಯಿತು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸುನಂದ ಅರುಲ್ ಉಪಸ್ಥಿತರಿದ್ದರು.