ನವದೆಹಲಿ (ಪಿಟಿಐ): ‘ಮಳೆ ಅಭಾವದಿಂದ ಉಂಟಾಗುವ ಆಹಾರ ಉತ್ಪಾದನೆಯ ಕೊರತೆ ಹಾಗೂ ನಂತರ ಎದುರಾಗಬಹುದಾದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಿದ್ಧವಿದೆ’ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಕೃಷಿ ಇಲಾಖೆಯ ಒಂದು ವರ್ಷದ ಸಾಧನೆಗಳನ್ನು ಹಂಚಿಕೊಳ್ಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯಗಳಿಂದ ಆಹಾರ ಉತ್ಪಾದನೆಯ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತಿದೆ. ಮಳೆ ಕೊರತೆ ಎದುರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆಸಿದೆ’ ಎಂದಿದ್ದಾರೆ.
‘ರೈತರ ಆದಾಯ ರಕ್ಷಣೆಯ ಉದ್ದೇಶದಿಂದ ಈ ವರ್ಷಾಂತ್ಯಕ್ಕೆ ಹೊಸ ಬೆಳೆ ವಿಮೆ ನೀತಿ ಜಾರಿಗೆ ತರಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದು ಸಿಂಗ್ ಹೇಳಿದ್ದಾರೆ.
‘ಭಾರತದಲ್ಲಿ ಮಳೆಯ ಕಾರಣದಿಂದ ಕೃಷಿ ವಲಯದಲ್ಲಿ ಏರಿಳಿತ ಇದ್ದೇಇರುತ್ತದೆ. ಆದಾಗ್ಯೂ ನಮ್ಮ ನೀತಿಗಳ ಮೂಲಕ ನಷ್ಟದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.