ಚಿಟಗುಪ್ಪ: ಮಹಿಳೆಯರ ರಕ್ಷಣೆ ಮಾಡುವ ಹೊಣೆಗಾರಿಕೆ ಪ್ರಜ್ಞಾವಂತ ಸಮಾಜದ ಎಲ್ಲ ಜನರ ಮೇಲಿದೆ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎ.ಬಿ.ಸಜ್ಜನ್ ಹೇಳಿದರು.
ಗುರುವಾರ ಹುಮನಾಬಾದ್ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಲತಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಮಹಿಳಾ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಆದರ್ಶ ಸಮಾಜ ನಿರ್ಮಾಣ ಮಾಡಲು ಮಹಿಳೆ ಪಾತ್ರ ಅಗತ್ಯವಾಗಿದೆ. ಎಲ್ಲರೂ ಮಹಿಳೆಯರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.
ಹುಮನಾಬಾದ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರಾದ ಮಲ್ಲಮ್ಮ, ಹೊನ್ನಮ್ಮ ಮಾತನಾಡಿದರು. ಲತಾ ಸಂಸ್ಥೆ ಸಂಚಾಲಕಿ ಸುಮತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮನಸ್ವಿನಿ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸಾವಿತ್ರಾ ಶೀಲವಂತ ಸ್ವಾಗತಿಸಿದರು. ಮಮಿತಾ ನಿರೂಪಿಸಿದರು. ಜ್ಯೋತಿ ವಂದಿಸಿದರು.