ಬೆಂಗಳೂರು: ‘ಮಾಧ್ಯಮಗಳು ಸಕಾರಾತ್ಮಕ ಸುದ್ದಿಗಳನ್ನು ಬಿಟ್ಟು ನಕಾರಾತ್ಮಕ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿವೆ’ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಳವಳ ವ್ಯಕ್ತಪಡಿಸಿದರು. ಭಾನುವಾರ ‘ವೈಶ್ಯ ಸಂಪದ ಕನ್ನಡ ಮಾಸಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಹಾಗೂ ಜ್ಞಾನ ಸಂಪದ ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾಧ್ಯಮಗಳು ವಿಧಾನಸೌಧದಲ್ಲಿ ನಡೆಯುವ ಅಧಿವೇಶನ, ಕಾರ್ಯ ಕಲಾಪಗಳನ್ನು ಜಗಳವಾಡುವ ಸ್ಥಳದ ರೀತಿಯಲ್ಲಿ ಬಿಂಬಿಸುತ್ತಿವೆ. ಅಲ್ಲಿ ನಡೆಯುವ ಚರ್ಚೆ, ಮಸೂದೆ ಅಂಗೀಕಾರ ಮುಂತಾದ ಪ್ರಮುಖ ಅಂಶ ಕಡೆಗಣಿಸುತ್ತಿವೆ’ ಎಂದು ಅಭಿಪ್ರಾಯ ಪಟ್ಟರು.
‘ಟೆಲಿವಿಷನ್ ರೇಟಿಂಗ್ ಪಾಯಿಂಟ್ ನ (ಟಿಆರ್ಪಿ) ಭರಾಟೆಯಲ್ಲಿ ಮಾಧ್ಯಮ ಗಳು ಒಳ್ಳೆಯ ಸುದ್ದಿಗಳನ್ನು ಕಡೆಗಣಿಸಿ ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ’ ಎಂದು ದೂರಿದರು.
ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ‘ದೇಶದ ಪ್ರಗತಿಯಲ್ಲಿ ಮಾಧ್ಯಮದ ಜವಾಬ್ದಾರಿ ದೊಡ್ಡದು. ನಕಾರಾತ್ಮಕ ಸುದ್ದಿಗಳನ್ನು ಜನರಿಗೆ ತಿಳಿಸುವ ಅವಶ್ಯಕತೆ ಇದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ’ ಎಂದು ಹೇಳಿದರು.
‘ಕಾನೂನಿನ ಪ್ರಕಾರ ಆಸ್ತಿ ಸಂಪಾದಿಸಿದರೆ ತಪ್ಪಿಲ್ಲ, ಅಕ್ರಮವಾಗಿ ಆಸ್ತಿ ಸಂಪಾದಿಸಿದರೆ ಶಿಕ್ಷೆ ಅನುಭವಿ ಸಬೇಕಾಗುತ್ತದೆ’ ಎಂದು ಹೇಳಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಜನರಿಗೆ ‘ಜ್ಞಾನ ಸಂಪದ’ ಪ್ರಶಸ್ತಿ ಪ್ರದಾನ ಮಾಡಲಾಯಿತು.