ಪುದುಚೇರಿ (ಪಿಟಿಐ): ಶ್ರೀಲಂಕಾ ವಶದಲ್ಲಿದ್ದ ಐವರು ಮೀನುಗಾರರು ಗಲ್ಲು ಶಿಕ್ಷೆಯಿಂದ ಪಾರಾಗಿ ಸ್ವದೇಶಕ್ಕೆ ಬಂದಿರುವುದನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸುತ್ತಿದೆ ಎಂದು ಸಿಪಿಐ ಶನಿವಾರ ಆರೋಪಿಸಿದೆ.
ಮಾದಕವಸ್ತು ಕಳ್ಳ ಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ತಮಿಳುನಾಡಿದ ಐವರು ಮೀನು ಗಾರರಿಗೆ ಶ್ರೀಲಂಕಾದ ಕೋರ್ಟ್ ಮರಣ ದಂಡನೆ ವಿಧಿಸಿತ್ತು. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಕ್ಷಮಾದಾನ ನೀಡಿದ ನಂತರ ಮೀನುಗಾರರು ಸ್ವದೇಶಕ್ಕೆ ಶುಕ್ರವಾರ ಮರಳಿದ್ದರು. ‘ಮೀನುಗಾರರ ಬಿಡುಗಡೆಯನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ದೂರಿದ್ದಾರೆ.
‘ಬಿಜೆಪಿಯಿಂದಾಗಿಯೇ ಈ ಐವರು ಮೀನುಗಾರರು ಬಿಡುಗಡೆಯಾಗಿದ್ದಾರೆ ಎಂದಾದರೇ ಶ್ರೀಲಂಕಾ ವಶದಲ್ಲಿರುವ ಸಾಕಷ್ಟು ಸಂಖ್ಯೆಯ ಭಾರತದ ಮೀನುಗಾರರು ಇನ್ನೂ ಏಕೆ ಬಿಡುಗಡೆಯಾಗಿಲ್ಲ. ಅವರಿಂದ ವಶಪಡಿಸಿಕೊಂಡಿರುವ ಮೀನುಗಾರಿಕಾ ಸಾಮಗ್ರಿಗಳನ್ನು ಪಡೆದಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಕಚ್ಚತೀವು ಒಪ್ಪಂದವನ್ನು ಮತ್ತೆ ಜಾರಿಗೆ ತಂದು ಭಾರತದ ಮೀನುಗಾರರ ಹಕ್ಕನ್ನು ಉಳಿಸುವಂತಾಗಲಿ ಎಂದು ರಾಜಾ ಒತ್ತಾಯಿಸಿದ್ದಾರೆ.