ನವದೆಹಲಿ (ಪಿಟಿಐ): ‘ಪಾಕಿಸ್ತಾನ ಸರ್ಕಾರ, ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳು ಜಮ್ಮು– ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದ್ದರು’ ಎಂದು ಜಮ್ಮು– ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ನೀಡಿರುವ ಹೇಳಿಕೆಯನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ನ ಶಾಂತಾರಾಮ್ ನಾಯಕ್, ‘ಮುಫ್ತಿ ಹೇಳಿಕೆಯು ರಾಷ್ಟ್ರವಿರೋಧಿ’ ಎಂದಿದ್ದಾರೆ.
‘ಜಮ್ಮು– ಕಾಶ್ಮೀರದಲ್ಲಿ ಶಾಂತಿಯುತ ಮತದಾನಕ್ಕೆ ಪಾಕಿಸ್ತಾನ ಸರ್ಕಾರ, ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳು ಸಹಕರಿಸಿದ್ದಾರೆ ಎಂದಿರುವ ಮುಫ್ತಿ, ರಾಜ್ಯದ ಜನತೆ, ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳನ್ನು ಕಡೆಗಣಿಸಿದ್ದಾರೆ’ ಎಂದು ನಾಯಕ್ ತಿಳಿಸಿದ್ದಾರೆ.
‘ಪ್ರಮಾಣ ವಚನ ಸ್ವೀಕರಿಸಿದ 24 ಮಂದಿ ಸಚಿವರ ಪೈಕಿ ಒಬ್ಬರ ಸಹೋದರ ಹುರಿಯತ್ನಲ್ಲಿದ್ದಾರೆ ಮತ್ತು ಅವರ ಪತ್ನಿ ಪಾಕಿಸ್ತಾನದವರು’ ಎಂದು ನಾಯಕ್ ಹೇಳಿದ್ದಾರೆ.
‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘370ನೇ ಕಲಂ ಬಗ್ಗೆ ಕನಿಷ್ಠ ಪಕ್ಷ ಚರ್ಚೆಯನ್ನಾದರೂ ನಡೆಸಿ’ ಎಂದು ಮೋದಿ ಹೇಳಿದ್ದರು. ಈಗ ಆ ವಿಷಯವನ್ನೇ ಮರೆತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.