ಮೈಸೂರು: ಜಿಲ್ಲಾ ಪಂಚಾಯಿತಿ ರೂಪಿಸಿರುವ ‘ಮೈ–ಸೂರು’ ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬಿಡುಗಡೆ ಮಾಡಿದರು.
ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವ ಈ ಆ್ಯಪ್ ಅನ್ನು www.mysuru.nic.in ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್ ಅವರ ಪರಿಕಲ್ಪನೆಯಲ್ಲಿ ರೂಪಿಸಿರುವ ಈ ಮೊಬೈಲ್ ಆ್ಯಪ್ನ ರೂಪರೇಷೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಗೋಪಾಲ್ ಸಿದ್ಧಪಡಿಸಿದ್ದಾರೆ. ಎನ್ಐಸಿ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ಮೈ–ಸೂರು ಮೊಬೈಲ್ ಆ್ಯಪ್ನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಲ್ಲಿ ಸರ್ಕಾರದಿಂದ ರೂಪಿಸಲಾಗಿರುವ ಯೋಜನೆಗಳಿಗೆ ಸಂಬಂಧಿಸಿದ ಪೂರ್ಣ ಮಾಹಿತಿ, ನಾಗರಿಕ ಸನ್ನದು, ದೂರು ಸಲ್ಲಿಸುವ ಅವಕಾಶವಿದೆ.
ಇಲಾಖೆಗಳ ಜಾಲತಾಣಗಳ ಲಿಂಕ್, ಜಿಲ್ಲಾಮಟ್ಟ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಈ ಆ್ಯಪ್ನಲ್ಲಿ ಲಭ್ಯ ಇರುತ್ತವೆ. ರೈತರಿಗೆ ಬೇಕಾದ ಮಾಹಿತಿಯೂ ಈ ಆ್ಯಪ್ ಮೂಲಕ ಸಿಗಲಿದೆ.
ಕುಂದುಕೊರತೆಗಳನ್ನು ನಾಗರಿಕರು ಚಿತ್ರ ಸಮೇತ ಆ್ಯಪ್ ಮೂಲಕ ಅಪ್ಲೋಡ್ ಮಾಡಬಹುದು.