ಶ್ರೀನಗರ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ಹಾಕಿದವರು ಸಮುದ್ರಕ್ಕೆ ಹಾರಬೇಕಾಗುತ್ತದೆ’ ಎಂದು ಭಾನುವಾರ ಹೇಳುವ ಮೂಲಕ ಕೇಂದ್ರ ಸಚಿವ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ವಿವಾದಕ್ಕೆ ನಾಂದಿ ಹಾಡಿದ್ದಾರೆ.
‘ಮೋದಿಗೆ ಮತ ಹಾಕದವರು ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೆಗೆ ನೀಡಿದ ಪ್ರತಿಕ್ರಿಯೆ ಇದು ಎಂದು ಫಾರೂಕ್ ಸ್ಪಷ್ಟನೆ ನೀಡಿದ್ದಾರೆ. ಕನ್ಯಾರ್ನಲ್ಲಿ ನಡೆದ ಚುನಾವಣಾ ರ್್ಯಾಲಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಜನತೆ ಕೋಮುವಾದವನ್ನು ಸ್ವೀಕಾರ ಮಾಡುವುದಿಲ್ಲ. ದೇಶದಲ್ಲಿ ಕೋಮುವಾದ ವ್ಯಾಪಕವಾದರೆ ಕಾಶ್ಮೀರಿಗಳು ಭಾರತದಲ್ಲಿರಲು ಬಯಸುವುದಿಲ್ಲ ಎಂದು ಹೇಳಿದರು.
‘ಕೋಮುವಾದಿ ಶಕ್ತಿಗಳಿಂದ ನಮ್ಮನ್ನು ರಕ್ಷಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಭಾರತ ಎಂದಿಗೂ ಕೋಮುವಾದ ರಾಷ್ಟ್ರವಾಗಲು ಸಾಧ್ಯವಿಲ್ಲ’ ಎಂದರು. ಫಾರೂಕ್ ಅಬ್ದುಲ್ಲಾ ರ್್ಯಾಲಿ ಆಯೋಜಿಸಿದ್ದ ಸ್ಥಳದ ಸಮೀಪದಲ್ಲೇ ಸ್ಫೋಟವೊಂದು ಸಂಭವಿಸಿದ್ದರಿಂದ ಸಾರ್ವಜನಿಕರ ಮತ್ತು ಭದ್ರತಾ ಸಿಬ್ಬಂದಿಯ ಆತಂಕಕ್ಕೆ ಕಾರಣವಾಯಿತು. ‘ಇಂತಹ ಕೃತ್ಯಗಳಿಂದ ನಾನು ಎದೆಗುಂದುವುದಿಲ್ಲ ಮತ್ತು ಓಡಿಯೂ ಹೋಗುವುದಿಲ್ಲ’ ಎಂದೂ ನುಡಿದರು.