ಬೆಂಗಳೂರು: ‘ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಹಂಬಲ ಹಾಗೂ ಮೌಲ್ಯಯುತ ಬರವಣಿಗೆಯಿಂದ ಮಾತ್ರ ಬರಹಗಾರ ಎಲ್ಲರ ಮನಸ್ಸಿನಲ್ಲಿ ಉಳಿಯಲು ಸಾಧ್ಯ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರವು ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ’ದಲ್ಲಿ ಮಾತನಾಡಿದರು.
‘ಸಾಹಿತ್ಯದಲ್ಲಿ ಅಲಂಕಾರ ಪ್ರಧಾನವಲ್ಲ, ದರ್ಶನ ಮುಖ್ಯವಾಗುತ್ತದೆ. ಅನೇಕ ಅಲಂಕಾರ ಪದಗಳನ್ನು ಬಳಸಿ ಒಂದು ಕಾವ್ಯ ರಚಿಸಬಹುದು. ಆದರೆ, ಕಾವ್ಯವು ಏನನ್ನು ಧ್ವನಿಸುತ್ತದೆ ಎಂಬುದು ಮುಖ್ಯ. ಹೀಗಾಗಿ, ಸ್ತುತಿಗಿಂತ, ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ಬರವಣಿಗೆ ಹೆಚ್ಚು ಬಾಳುತ್ತದೆ’ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾದೇವಿ, ‘ಇಂದು ತಂತ್ರಜ್ಞಾನ ಬದಲಾಗುತ್ತಿದೆ. ಹೀಗಾಗಿ, ಇಲ್ಲಿ ಬಿಡುಗಡೆಯಾದ ಪುಸ್ತಕಗಳನ್ನು ‘ಇ–ಪುಸ್ತಕಗಳ ಲೈಬ್ರರಿ’ ಕಿಂಡಲ್ನಲ್ಲಿ ಹಾಕಿದರೆ, ಇನ್ನೂ ಅನೇಕ ಯುವಜನರು ಓದಿ ಸ್ಫೂರ್ತಿ ಪಡೆಯಬಹುದು ಎಂದರು.
ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಬಹುಮಾನದ ಹಣ ಮುಖ್ಯವಾಗುವುದಿಲ್ಲ. ಬದಲಿಗೆ ಇಂತಹ ಸಂಸ್ಥೆಯಿಂದ ಬಹುಮಾನ ಪಡೆದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಇಲ್ಲಿ ಕಾವ್ಯ ಕೃತಿಗಳೇ ಹೆಚ್ಚು ಬಿಡುಗಡೆಯಾಗಿವೆ. ಕಾವ್ಯವು ನಿರಂತರ ಪ್ರಯೋಗದಿಂದ ಮಾತ್ರ ಉಳಿಯುತ್ತದೆ’ ಎಂದರು. 37 ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.