ನಿರ್ದೇಶಕ ಆದಿತ್ಯ ಛೋಪ್ರಾ ಅವರೊಂದಿಗೆ ಸೋಮವಾರ (ಏ.21) ಇಟಲಿಯಲ್ಲಿ ಮದುವೆಯಾದ ನಟಿ ರಾಣಿ ಮುಖರ್ಜಿ ಖುಷಿಯಲ್ಲಿ ತೇಲುತ್ತಿದ್ದಾರೆ. ಆದರೆ ಅದೇಕೋ ಆ ಖುಷಿಯಲ್ಲಿ ಕೊರತೆ ಕಾಣುತ್ತಿದೆ ಎಂದಿರುವ ರಾಣಿ, ಇದಕ್ಕೆ ಯಶ್ ಛೋಪ್ರಾ ಅವರು ಇಲ್ಲದಿರುವುದೇ ಕಾರಣ ಎಂದು ಅವರನ್ನು ನೆನೆಸಿಕೊಂಡರು.
ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದ ಈ ಮದುವೆಯಲ್ಲಿ ಯಶ್ ಛೋಪ್ರಾ ಅವರ ಅಗಲಿಕೆ ಎದ್ದು ಕಾಣುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಆದಿತ್ಯ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆ ಮೌನವಾಗಿದ್ದ ರಾಣಿ ಇದೀಗ ತಮ್ಮ ಜೀವನದ ಅತಿ ಸಂತೋಷದ ಕ್ಷಣದ ಬಗ್ಗೆ ಸಾಕಷ್ಟು ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.
‘ನನ್ನ ಜೀವನದ ಅತಿ ಸುಂದರ ಕ್ಷಣವಿದು. ಈ ಸಂತೋಷವನ್ನು ನನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮನಸ್ಸು ಬಯಸುತ್ತಿದೆ. ನನ್ನನ್ನು ಇಲ್ಲಿವರೆಗಿನ ಮತ್ತು ಮುಂದಿನ ಪಯಣದಲ್ಲೂ ಅವರ ಪ್ರೀತಿ ಮತ್ತು ಆಶೀರ್ವಾದವೇ ನನ್ನ ಜೊತೆಗಿರುತ್ತದೆಂದು ನಂಬಿದ್ದೇನೆ. ಇದುವರೆಗೂ ನಾನು ಮದುವೆಯಾಗಲಿ ಎಂದು ಬಯಸುತ್ತಿದ್ದ ನನ್ನ ಹಿತೈಷಿಗಳಿಗಂತೂ ಸಾಕಷ್ಟು ಖುಷಿಯಾಗಿದೆ’ ಎಂದು ಸಂತೋಷದಿಂದ ಬೀಗಿದರು.
ಇಟಲಿಯಲ್ಲಿ ಮದುವೆ ಎನ್ನುವುದು ರೋಮಾಂಚಕ ಅನುಭವ ಎಂದು ಬಾಯ್ತುಂಬ ಹೊಗಳಿದ ರಾಣಿ, ಯಶ್ ಛೋಪ್ರಾ ಅವರ ಅಗಲಿಕೆ ಕುರಿತು ಬೇಸರಿಸುತ್ತಲೇ, ‘ಅವರು ಈ ಕ್ಷಣ ಇಲ್ಲದಿರುವುದು ತುಂಬಾ ಬೇಸರ ಅನಿಸುತ್ತಿದೆ. ಆದರೆ ಅವರು ನಮ್ಮೊಂದಿಗೆ ಸದಾ ಇರುತ್ತಾರೆ ಎಂದು ಭಾವಿಸಿದ್ದೇವೆ. ಅವರ ಪ್ರೀತಿ ಮತ್ತು ಆಶೀರ್ವಾದ ನನ್ನ ಮತ್ತು ಆದಿ ಮೇಲೆ ಯಾವಾಗಲೂ ಇರುತ್ತದೆ. ‘ದೇವರ ದಯೆಯಿಂದ ನನ್ನ ಜೀವನ ಚೆನ್ನಾಗಿದೆ. ನನ್ನ ಜೀವನದಲ್ಲಿ ವಿವಾಹ ಎಂಬ ಅತಿ ಮುಖ್ಯ ಘಟ್ಟ ತಲುಪಿದ್ದೇನೆ’ ಎಂದು ಹೇಳಿಕೊಂಡರು.