ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಮತ್ತಷ್ಟು ಮೃದುವಾಗಿರುವ ಶಿವಸೇನೆ, ಬಿಜೆಪಿ ಆಯ್ಕೆ ಮಾಡುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೆಂಬಲಿಸಲು ಸಿದ್ಧ ಎಂದು ಸೋಮವಾರ ತಿಳಿಸಿದೆ.
‘ಲಕ್ಷ್ಮೀ ಪೂಜೆಯ ದಿನ ದೇವೆಂದ್ರ ಫಡ್ನವೀಸ್ ಅವರು ಗಡ್ಕರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಗಡ್ಕರಿ ಅವರು ಆರ್ಎಸ್ಎಸ್ ಮುಖ್ಯಸ್ಥರನ್ನು ಭೇಟಿಮಾಡಿ ಆಶೀರ್ವಾದ ಪಡೆದರು. ಈ ಆಶೀರ್ವಾದಗಳು ಮಹತ್ವವೇ ಆದರೂ ಜನತೆಯ ಹಾರೈಕೆಗಳು ತುಂಬಾನೆ ಮುಖ್ಯ. ಜನತೆಯ ಆಶೀರ್ವಾದದೊಂದಿಗೆ ಮಹಾರಾಷ್ಟ್ರವನ್ನು ಮುನ್ನಡೆಸುವ ಯಾವುದೇ ವ್ಯಕ್ತಿಗೂ ಬೆಂಬಲ ನೀಡಲು ಶಿವಸೇನೆ ಸಿದ್ಧವಿದೆ’ ಎಂದು ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಅದು ಹೇಳಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ಗಿಂತಲೂ ಗಡ್ಕರಿ ಉತ್ತಮ ಎಂದೂ ಸೇನೆ ಅಭಿಪ್ರಾಯ ಪಟ್ಟಿದೆ.
‘ದೆಹಲಿಯಲ್ಲಿರುವ ಹೈಕಮಾಂಡ್ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಈ ಬಗ್ಗೆ ರಾಜ್ಯದ ನಾಯಕರು ಚಿಂತಿಸುವುದರಲ್ಲಿ ಅರ್ಥವಿಲ್ಲ. ಗಡ್ಕರಿ ಅವರು ನುರಿತ ವ್ಯಕ್ತಿ. ಅವರಿಗೆ ಅಭಿವೃದ್ಧಿಯ ದೃಷ್ಟಿಕೋನವೂ ಇದೆ. ಆದರೆ ಫಡ್ನವೀಸ್ ಅವರಿಗೆ ಆಡಳಿತ ನಡೆಸಿದ ಅನುಭವಿಲ್ಲ’ ಎಂದೂ ಹೇಳಿದೆ.