ಮಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ 500 ಎಕರೆ ಭೂಮಿ ನೀಡಲು ಹಾಗೂ ಶೇ 10 ಪಾಲು ಬಂಡವಾಳ ಹೂಡಲು ರಾಜ್ಯ ಸರ್ಕಾರ ಒಪ್ಪಿದೆ. ಆದಷ್ಟು ಬೇಗ ಭೂಮಿ ನೀಡಿದರೆ, ಕೇಂದ್ರ ಸರ್ಕಾರವು ₹50 ಸಾವಿರ ಕೋಟಿ ಬಂಡವಾಳ ಹೂಡಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯನ್ನು ಆರಂಭಿಸಲು ಕೇಂದ್ರ ಸಿದ್ಧತೆ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆಯೂ ಮಾತುಕತೆ ನಡೆಸಿದ್ದೇನೆ.
ಈ ಸಂಸ್ಥೆ ಸ್ಥಾಪಿಸಲು ಬೇಕಾದ ಮೂಲ ಸೌಕರ್ಯ ಒದಗಿಸುವ ಬಗ್ಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಿಂದ ಸಿಕ್ಕಿದಷ್ಟು ಸ್ಪಂದನೆ ನಮ್ಮ ರಾಜ್ಯದಿಂದ ಸಿಕ್ಕಿಲ್ಲ’ ಎಂದು ಅವರು ದೂರಿದರು.
ದುಬಾರಿ ಔಷಧಿ ಯಾಕೆ... ‘ಜೆನೆರಿಕ್’ ಓಕೆ
‘ಜೆನರಿಕ್ ಔಷಧಿ ಕೇಂದ್ರ ಆರಂಭಿಸಲು ಕೇಂದ್ರದ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗೆ ಹಾಗೂ ಆರೋಗ್ಯ ಸಚಿವರಿಗೆ ಬರೆದಿದ್ದೇನೆ. ಇನ್ನೂ ಉತ್ತರ ಬಂದಿಲ್ಲ. ದುಬಾರಿ ಬೆಲೆಗೆ ಔಷಧ ಮಾರುವ ಮಾಫಿಯಾಕ್ಕೆ ಕಡಿವಾಣ ಹಾಕಲು ಜೆನರಿಕ್ ಔಷಧಿ ಬಳಕೆಗೆ ಸೂಚಿಸುವಂತೆ ಸರ್ಕಾರ ಆದೇಶಿಸಬೇಕು’ ಎಂದು ಅನಂತಕುಮಾರ್ ಆಗ್ರಹಿಸಿದರು.