ನವದೆಹಲಿ (ಪಿಟಿಐ): ಎನ್ಡಿಎ ಸರ್ಕಾರವು ಸಿಬಿಐಯನ್ನು ‘ರಾಜಕೀಯ ಅಸ್ತ್ರ’ವಾಗಿ ಬಳಸುತ್ತಿದೆ ಮತ್ತು ಸಿಬಿಐಯು ಪ್ರಧಾನಿ ಕಚೇರಿಯ (ಪಿಎಂಒ) ಒಂದು ಇಲಾಖೆಯಂತೆ ಕೆಲಸ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿಯೂ ಆಗಿರುವ ಅವರು ಗುರುವಾರ ಸಂಸತ್ ಭವನದ ಹೊರಗಡೆ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಟಿಎಂಸಿ ಬುಡಮೇಲು ಮಾಡಲು ಯತ್ನಿಸಿರುವ ಬಿಜೆಪಿ ವಿರುದ್ಧ ನಾವೊಬ್ಬರೇ ಏಕಾಂಗಿಯಾಗಿ ಹೋರಾಡುತ್ತಿದ್ದೇವೆ. ರಾಜ್ಯದ ಸಾರಿಗೆ ಸಚಿವ ಮದನ್ ಮಿತ್ರಾ ಅವರ ಬಂಧನವು ರಾಜಕೀಯ ಪ್ರೇರಿತ. ನಮ್ಮ ಬಗ್ಗೆ ಬಿಜೆಪಿ ಅಸೂಯೆ ಹೊಂದಿದೆ. ಆದರೆ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗದು ಅಥವಾ ಹೇರಲಾಗದು’ ಎಂದು ಹೇಳಿದರು.
‘ಬಿಜೆಪಿ ತೋರುತ್ತಿರುವ ಮನೋಭಾವ ಸರ್ವಾಧಿಕಾರದ್ದು. ಟಿಎಂಸಿ ಯಾವುದೇ ಒತ್ತಡಕ್ಕೆ ಮಣಿಯದು. ದೇಶದ ಜನತೆಗೆ ಮಾತ್ರ ತಲೆ ಬಾಗುತ್ತದೆ. ಇದು ರಾಜಕೀಯ ಹೋರಾಟ. ಪಕ್ಷವು ರಾಜಕೀಯವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತದೆ. ನೀವು, ನಮ್ಮ ಧ್ವನಿಯನ್ನು ನಿಲ್ಲಿಸಲಾಗದು’ ಎಂದರು.
‘ಶಾರದಾ ಚಿಟ್ಫಂಡ್ ಹಗರಣದಲ್ಲಿ ನಮ್ಮ ಪಕ್ಷದ ಪಾತ್ರವಿಲ್ಲ ಮತ್ತು ಇದು ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿಲ್ಲ’ ಎಂದ ಅವರು, ‘ಸಿಬಿಐ ತನಿಖೆಗೆ ಹಲವು ಪ್ರಕರಣಗಳಿದ್ದರೂ, ಯಾವುದರಲ್ಲೂ ಫಲಿತಾಂಶ ಬಂದಿಲ್ಲ’ ಎಂದು ಟೀಕಿಸಿದರು.