ಚಿಕ್ಕಬಳ್ಳಾಪುರ: ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಅರಣ್ಯ ಇಲಾಖೆ ಆಯೋಜಿಸಿದ್ದ ‘ಲಕ್ಷ ವೃಕ್ಷ’ ಅಭಿಯಾನ ಮತ್ತು ಸೋಲಾರ್ ಲ್ಯಾಂಪ್ ವಿತರಣೆಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಗರದಲ್ಲಿ ಮರಗಳಿದ್ದಾಗ ಮಾಲಿನ್ಯ ತಗ್ಗಿಸಬಹುದು. ಶಾಲೆ, ಕುಟುಂಬದಲ್ಲಿ ಸಸಿ ನೆಟ್ಟು, ಪೋಷಿಸುವುದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ಉತ್ತಮ ಗಾಳಿ, ನೆರಳಿಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದಾದರೂ ಸಸಿ ನೆಟ್ಟು ಬೆಳೆಸಬೇಕು. ಈಗಾಗಲೇ ಕೃಷಿ ಭೂಮಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದೇವೆ. ಪರಿಸರ ಸಮತೋಲನ ಕಾಪಾಡಲು ಮರಗಳನ್ನು ಬೆಳೆಸೋಣ. ಮರಗಳಿಂದ ಜೀವವೈವಿಧ್ಯತೆ ರಕ್ಷಣೆಯಾಗುತ್ತದೆ ಎಂದರು.
ಇದೇ ವೇಳೆ ಪರಿಶಿಷ್ಟ ಜಾತಿ ಹಾಗೂ ಜನಾಂಗದವರಿಗೆ ಉಚಿತವಾಗಿ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಲ್ಯಾಂಪ್ ವಿತರಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ದೇವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಟಿ.ಮುರಳೀಧರ್, ವಲಯ ಅರಣ್ಯಾಧಿಕಾರಿ ಆರ್.ಸುರೇಶ್, ಉಪವಲಯ ಅರಣ್ಯಾಧಿಕಾರಿ ತನ್ವೀರ್ ಅಹ್ಮದ್, ಸಿಬ್ಬಂದಿ ನರಸಿಂಹಮೂರ್ತಿ, ಸುಬ್ಬಾರೆಡ್ಡಿ, ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಶಬೀನಾ ತಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶ್ವತ್ಥರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಡಿವೈಪಿಸಿ ಮಂಜುನಾಥ್, ದ್ಯಾವಪ್ಪ, ಕೃಷ್ಣಮೂರ್ತಿ, ಸುರೇಶ್ ಹಾಜರಿದ್ದರು.