ಉಡುಪಿ: ‘ಜೀವನೋಪಾಯಕ್ಕೆ ಬೇಕಾದ ಅಗತ್ಯ ಕೌಶಲ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಅಣಿಗೊಳಿಸುವ ಕೆಲಸ ಮಾಡಬೇಕಿದೆ’ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ದಲ್ಲಿ ಶುಕ್ರವಾರ ನಡೆದ ₨4 ಕೋಟಿ ವೆಚ್ಚದ ಕೌಶಲ ಅಭಿವೃದ್ಧಿ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜೀವನಕ್ಕೆ ಅನುಗುಣ ವಾಗುವ ವಿದ್ಯಾಭ್ಯಾಸ ನೀಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎನಿಸುತ್ತದೆ. ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಯನ್ನೇ ಈಗಲೂ ಅನುಸರಿಸುತ್ತಿರುವುದು ಇದ ಕ್ಕೊಂದು ಕಾರಣ. ಪಕ್ಕದ ಚೀನಾ ರಾಷ್ಟ್ರಕ್ಕೆ ಹೋಲಿಸಿದರೆ ಕೌಶಲ ತರಬೇತಿ ಯಲ್ಲಿ ನಾವು ಹಿಂದುಳಿದಿದ್ದೇವೆ. ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಪಾರಂಪರಿಕ ನಗರವನ್ನಾಗಿ ಉಡುಪಿ ಯನ್ನು ಅಭಿ ವೃದ್ಧಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೂ ಉಡುಪಿ ಆಯ್ಕೆ ಯಾದರೆ, ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹರಿದು ಬರಲಿದೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇದಕ್ಕೆ ಶಿಫಾರಸು ಮಾಡಬೇಕು ಎಂದು ಸೊರಕೆ ಮನವಿ ಮಾಡಿದರು.
‘ಭಗವಂತನನ್ನು ಪ್ರತಿಮೆಗಳಲ್ಲಿ ಮಾತ್ರ ಕಾಣಬಾರದು. ದುಃಖ– ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುವ ಮೂಲಕ ದೇವರನ್ನು ಪ್ರಸನ್ನ ಗೊಳಿಸಿ ಆತನ ಅನುಗ್ರಹಕ್ಕೆ ಪಾತ್ರರಾಗ ಬೇಕು. ಈ ನಿಟ್ಟಿನಲ್ಲಿ ಮಠದ ಮೂಲಕ ಹತ್ತಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುಮಾರು ₨ 40 ಲಕ್ಷ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಿ ಕೊಡಲಾಗುತ್ತಿದೆ. ಶಾಲಾ– ಕಾಲೇಜು, ವಿದ್ಯಾರ್ಥಿ ನಿಲಯ ಮತ್ತು ವೈದ್ಯಕೀಯ ಕೇಂದ್ರಗಳ ಮೂಲಕವೂ ಸೇವೆ ಸಲ್ಲಿಸ ಲಾಗುತ್ತಿದೆ’ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಶಿಲಾನ್ಯಾಸ ನೆರವೇರಿಸಿ ಮಾತ ನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕೌಶಲ ಭಾರತದ ಭವಿಷ್ಯ ಎನ್ನಬಹುದು. ಮೂಲ ಸೌಕರ್ಯ ನಿರ್ಮಾಣ ಮಾಡಿ ತರಬೇತಿ ನೀಡುವ ಮೂಲಕ ಇದನ್ನು ಸಾಕಾರ ಗೊಳಿಸಬೇಕು. ನಾವು ಮಕ್ಕಳನ್ನು ಹೇಗೆ ತಯಾರು ಮಾಡುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿರ್ಧಾರವಾಗಲಿದೆ ಎಂದರು.
ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟ ಣಶೆಟ್ಟಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ. ನಾರಾಯಣ್ ಉಪಸ್ಥಿತರಿದ್ದರು. ಶ್ರೀಕೃಷ್ಣ ಬಾಲನಿಕೇತನದ ಉಪಾಧ್ಯಕ್ಷ ಪ್ರೊ. ಕಮಾಲಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ರಾಮ ಚಂದ್ರ ಉಪಾ ಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಂಟಿ ಕಾರ್ಯದರ್ಶಿ ರಾಘವೇಂದ್ರ ರಾವ್ ವಂದನಾರ್ಪಣೆ ಮಾಡಿದರು. ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.