ವಾಷಿಂಗ್ಟನ್ (ಪಿಟಿಐ): ವೀಸಾ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ವಿಚಾರಣೆಯಿಂದ ವಿನಾಯ್ತಿ ಸೌಲಭ್ಯ ಹೊಂದಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.
ಬಂಧನದ ಅವಧಿಯಲ್ಲಿ ದೇವಯಾನಿ ಅವರೊಂದಿಗೆ ಅಧಿಕಾರಿಗಳು ತೋರಿರುವ ಅಮಾನವೀಯ ವರ್ತನೆಯು ಅಮೆರಿಕದ ಅಂತರರಾಷ್ಟ್ರೀಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದೂ ಅವರು ಹೇಳಿದ್ದಾರೆ.
‘ರಾಜತಾಂತ್ರಿಕ ಹುದ್ದೆಯನ್ನು ಹೊಂದಿದ್ದರಿಂದ ದೇವಯಾನಿ ಅವರಿಗೆ ವಿಚಾರಣೆಯಿಂದ ವಿನಾಯ್ತಿ ಇದೆ. ಆದರೆ, ಈ ಪ್ರಕರಣದಲ್ಲಿ ಅಮೆರಿಕ ತಪ್ಪು ನಿರ್ಣಯ ಕೈಗೊಂಡಿದೆ’ ಎಂದು ಅವರ ಪರ ವಕೀಲ ಡೇನಿಯಲ್ ಎನ್ ಅರ್ಶಕ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕದ ಸರ್ಕಾರಗಳು ಉನ್ನತ ಮಟ್ಟದಲ್ಲಿ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.