ನವದೆಹಲಿ (ಪಿಟಿಐ): ಕೇಂದ್ರ ಕಾರ್ಮಿಕ ಸಚಿವಾಲಯದ ‘ವಿಶಾಲ ವ್ಯಾಪ್ತಿ’ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಕರ್ನಾಟಕ ಮತ್ತು ಛತ್ತೀಸಗಡ ರಾಜ್ಯಗಳು ಜಾರಿ ಮಾಡಲು ಒಪ್ಪಿಕೊಂಡಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಸೋಮವಾರ ಲೋಕಸಭೆಗೆ ತಿಳಿಸಿದರು.
ಇಎಸ್ಐ ಸೌಲಭ್ಯವನ್ನು ನೀಡಲಾಗದ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ‘ವಿಶಾಲ ವ್ಯಾಪ್ತಿ’ ವೈದ್ಯಕೀಯ ಯೋಜನೆಯನ್ನು ರೂಪಿಸಿದ್ದು, ಇದನ್ನು ಜಾರಿ ಮಾಡುವ ಬಗ್ಗೆ ಎಲ್ಲಾ ರಾಜ್ಯಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಜ್ಯಗಳು ಈ ಯೋಜನೆಯನ್ನು ಜಾರಿ ಮಾಡಿದರೆ ವೆಚ್ಚ ಭರಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಈ ಯೋಜನೆಯನ್ನು ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಮತ್ತು ಛತ್ತೀಸಗಡ ಸರ್ಕಾರಗಳು ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತಲಾ ಎರಡು ರಂಗಗಳನ್ನು ಗುರುತಿಸಿವೆ ಎಂದೂ ಅವರು ತಿಳಿಸಿದ್ದಾರೆ.
ಇಎಸ್ಐ ಆಸ್ಪತ್ರೆ ತೆರೆಯಲು ಅಗತ್ಯವಾದ ಕಾರ್ಮಿಕರ ಸಂಖ್ಯೆ ಇರದ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಕಾರ್ಮಿಕರಿಗೆ ಕನಿಷ್ಠ ವೈದ್ಯಕೀಯ ನೆರವು ನೀಡುವುದು ‘ವಿಶಾಲ ವ್ಯಾಪ್ತಿ’ ಯೋಜನೆಯ ಉದ್ದೇಶವಾಗಿದೆ.