ಅಮೃತಸರ (ಪಿಟಿಐ): ‘ಕಳೆದ ಹತ್ತು ವರ್ಷಗಳಲ್ಲಿ ಸಿಬಿಐ ನಿರ್ದೇಶಕರು ಆಡಳಿತಾರೂಢ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ತನ್ನ ರಾಜಕೀಯ ವೈರಿಗಳನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ಬಳಸಿಕೊಳ್ಳುತ್ತಿರುವುದರಿಂದ ಅದರ ವಿಶ್ವಾಸಾರ್ಹತೆ ಕುಸಿದಿದೆ’ ಎಂದು ಇಲ್ಲಿನ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಹೇಳಿದರು.
‘ಸಿಬಿಐ ನಿರ್ದೇಶಕರ ಆಯ್ಕೆ ನಡೆಯುವುದು ಸರ್ಕಾರದಿಂದಲೇ ಹೊರತು ಸಮತೋಲಿತವಾದ ನೇಮಕಾತಿ ಮಂಡಳಿಗಳಿಂದ ಅಲ್ಲ. ಹೀಗಾಗಿ ಸಂಸ್ಥೆಯ ನಿರ್ದೇಶಕರನ್ನು ಕೇವಲ ಸರ್ಕಾರ ಮಾತ್ರ ವಲ್ಲದೆ ಆಡಳಿತಾರೂಢ ಪಕ್ಷದ ಪ್ರಮುಖರು ಕೂಡ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆದ ಜೇಟ್ಲಿ ಟೀಕಿಸಿದರು.
‘ಹಲವು ಸಂದರ್ಭಗಳಲ್ಲಿ ಒತ್ತಡಕ್ಕೆ ಸಿಲುಕಿ ಸರ್ಕಾರಕ್ಕೆ ಹತ್ತಿರವಾದವರಿಗೆ ಸಿಬಿಐ ಅನುಕೂಲ ಮಾಡಿಕೊಟ್ಟಿದೆ. ತದ್ವಿರುದ್ಧವಾಗಿ, ಸರ್ಕಾರಕ್ಕೆ ಪ್ರತಿರೋಧ ತೋರುವವರನ್ನು ಬಲಿಪಶು ಮಾಡಿರುವ ಪ್ರಕರಣಗಳೂ ನಡೆದಿವೆ’ ಎಂದು ಜೇಟ್ಲಿ ಹೇಳಿದರು.
ಮುಂಚೂಣಿ ವ್ಯಾಪಾರೋದ್ಯಮಿಯೊಬ್ಬರು ಸಿಬಿಐ ಕುರಿತು ಮಾಡುತ್ತಿರುವ ಆಪಾದನೆಗಳ ಬಗ್ಗೆ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ
ಚರ್ಚೆ ನಡೆಯುತ್ತಿದೆ. ಇಂತಹ ಚರ್ಚೆಗಳು ಸಿಬಿಐ ವಿಶ್ವಾಸಾರ್ಹತೆಯನ್ನು ಇನ್ನಷ್ಟು ತಗ್ಗಿಸುತ್ತವೆ ಎಂದು ಹೇಳಿದರು.
‘ಈ ಉದ್ಯಮಿ ಮಾಡುತ್ತಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸತ್ಯ ಏನೆಂಬುದನ್ನು ತಿಳಿಸಬೇಕಾಗಿದೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಇರಬೇಕು. ಸಿಬಿಐ ಅಧಿಕಾರಿಗಳಂತೂ ಪ್ರಾಮಾಣಿಕತೆ ರುಜುವಾತು ಪಡಿಸುವ ಬಗ್ಗೆ ಇನ್ನಷ್ಟು ಜಾಗೃತವಾಗಿರಬೇಕು’ ಎಂದು ಜೇಟ್ಲಿ ಹೇಳಿದರು.
ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ ಗಾಂಧಿ ಅವರು ಸಿಬಿಐನ್ನು ‘ಕೀಳುದರ್ಜೆಯ ತಂತ್ರೋಪಾಯಗಳ ಸಂಸ್ಥೆ’ ಎಂದು ಟೀಕಿಸಿರುವುದಕ್ಕೆ ಜೇಟ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.