ಬೆಂಗಳೂರು: ವೇಶ್ಯಾವೃತ್ತಿಯನ್ನು ಸರ್ಕಾರ ಕಾನೂನುಬದ್ಧಗೊಳಿಸಬೇಕು ಎಂದು ‘ನ್ಯಾಯಕ್ಕಾಗಿ ನಾವು’ ಸಂಘಟನೆ ಒತ್ತಾಯಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಇಂದೂಧರ ಹೊನ್ನಾಪುರ, ‘ಭಾರತದಲ್ಲಿ ಪುರಾತನ ಕಾಲದಿಂದಲೂ ವೇಶ್ಯಾವೃತ್ತಿ ನಡೆದುಕೊಂಡು ಬಂದಿದೆ. ಅದನ್ನು ಕಾನೂನುಬದ್ಧಗೊಳಿಸುವುದರಿಂದ ವೇಶ್ಯಾವೃತ್ತಿಯಲ್ಲಿ ತೊಡಗಿರುವವರಿಗೆ ರಕ್ಷಣೆ, ವೃತ್ತಿ ಗೌರವ ಹಾಗೂ ಆರೋಗ್ಯ ರಕ್ಷಣೆಗೆ ಅವಕಾಶ ನೀಡಿದಂತಾಗುತ್ತದೆ’ ಎಂದರು.
‘ಸಾಹಿತಿ ಕೆ.ಎಸ್.ನಿಸಾರ್ ಅಹಮದ್ ಅವರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ವೇಶ್ಯಾವೃತ್ತಿಯಲ್ಲಿ ತೊಡಗಿರುವವರು ಸಮಾಜದ್ರೋಹಿಗಳಲ್ಲ. ಬಹಿಷ್ಕೃತರಲ್ಲ. ಅವರನ್ನು ಗೌರವದಿಂದ ಕಾಣುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಅವರ ಬದುಕು ಸದಾ ಆತಂಕ, ಭಯದಿಂದ ಕೂಡಿರುತ್ತದೆ. ಸಮಾಜದ ತುಚ್ಛ ಮಾತುಗಳನ್ನು ಸಹಿಸಿಕೊಂಡು, ಅವರ ಮಕ್ಕಳು ಮತ್ತು ಅವರನ್ನು ನಂಬಿದ ಕುಟುಂಬದವರು ಅವಮಾನದಿಂದ ಬದುಕಬೇಕಾಗುತ್ತದೆ. ಹೀಗಾಗಿ, ಅವರೆಲ್ಲರಿಗೂ ಜೀವನ ಭದ್ರತೆಯನ್ನು ಒದಗಿಸಲು ಹಾಗೂ ಎಲ್ಲರಂತೆ ಗೌರವದಿಂದ ಬದುಕಲು ಈ ವೃತ್ತಿಯನ್ನು ಕಾನೂನುಬದ್ಧಗೊಳಿಸುವುದು ಮುಖ್ಯವಾಗಿದೆ’ ಎಂದರು.
ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ವೇಶ್ಯಾವೃತ್ತಿಯಲ್ಲಿ ತೊಡಗಿರುವವರು ಪೊಲೀಸರ ದೌರ್ಜನ್ಯ ಹಾಗೂ ದಲ್ಲಾಳಿಗಳ ಶೋಷಣೆಯಿಂದ ನರಳಬೇಕಾಗುತ್ತದೆ. ಇವುಗಳಿಗೆ ಮುಕ್ತಿ ದೊರಕಿಸಲು ಕಾನೂನುಬದ್ಧಗೊಳಿಸುವುದು ಅಗತ್ಯವಾಗಿದೆ’ ಎಂದರು.
ಸಂಘಟನೆಯ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್, ‘ಅಹಿಂದ’ ರಾಜ್ಯಾಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ ಭಾಗವಹಿಸಿದ್ದರು.