ಬೆಂಗಳೂರು: ‘ಶವ ಪರೀಕ್ಷೆಯ ಎಲ್ಲಾ ವರದಿಗಳೂ ನೈಜವಾಗಿರುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಹೈಕೋರ್ಟ್ ಈ ರೀತಿಯ ವರದಿಗಳನ್ನು ಪ್ರಾಸಿಕ್ಯೂಷನ್ ಯಾವಾಗಲೂ ಗಂಭೀರವಾಗಿ ಗಮನಿಸಿ ಮುಂದುವರಿಯಬೇಕು ಎಂದು ಸಲಹೆ ಮಾಡಿತು.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸಿಗಳಾದ ಪುಷ್ಕರ್ ರಾವ್ ಹಾಗೂ ಸಾವಿತ್ರಿ ದೇವಿ ದಂಪತಿಯ ಮಗ ಪ್ರಳಯ್ 2011ರ ಜನವರಿ 10ರಂದು ತನ್ನ ಮನೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಮೃತಪಟ್ಟಿದ್ದ. ಶವಪರೀಕ್ಷೆ ವರದಿ ಇದನ್ನು ಆತ್ಮಹತ್ಯೆ ಎಂದು ಹೇಳಿತ್ತು.
ಆದರೆ ಪ್ರಳಯ್ನ ತಂದೆ ತಾಯಿ ಇದನ್ನು ಒಪ್ಪಿರಲಿಲ್ಲ. ನನ್ನ ಮಗನ ಸಾವು ಅಸಹಜವಾಗಿದೆ. ಆದ್ದರಿಂದ ಈ ಪ್ರಕರಣವನ್ನು ಪುನರ್ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗುರುವಾರ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಪೀಠವು ಪ್ರಾಸಿಕ್ಯೂಷನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
‘ಪೊಲೀಸರು ಪ್ರಳಯ್ ನೇಣು ಹಾಕಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಶವ ಸ್ಥಳಾಂತರ ಮಾಡುವ ಮುನ್ನ ನೇಣು ಬಿಗಿದುಕೊಂಡಿರುವ ಛಾಯಾಚಿತ್ರಗಳನ್ನು ಗಮನಿಸಿದರೆ ಹಾಗೆನ್ನಿಸುವುದೇ ಇಲ್ಲ. ಚಾವಣಿಗೂ ಹಾಗೂ ಮಂಚದ ಮಧ್ಯೆ ದೇಹ ನೇತಾಡುವಷ್ಟು ಅಂತರವಿಲ್ಲ. ನೇಣು ಹಾಕಿಕೊಂಡಾಗ ಸಾಮಾನ್ಯವಾಗಿ ನಾಲಿಗೆ ಬಾಯಿಯಿಂದ ಹೊರ ಚಾಚಿಕೊಂಡಿರುತ್ತದೆ.
ಆದರೆ ಅದೂ ಇಲ್ಲಿ ಕಾಣಬರುತ್ತಿಲ್ಲ. ಆದ್ದರಿಂದ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಅನ್ನಿಸುತ್ತಿಲ್ಲ. ಯಾರೋ ಇದನ್ನು ನೇತುಹಾಕಿದ್ದಾರೆ ಎನ್ನಿಸುತ್ತಿದೆ. ಅಮಾಯಕ ಯುವಕನೊಬ್ಬನ ಸಾವನ್ನು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ಶವ ಪರೀಕ್ಷೆಯ ವರದಿಗಳು ನ್ಯಾಯಪೀಠಕ್ಕೆ ತೃಪ್ತಿ ತರುವಂತಿಲ್ಲ. ಶವ ಪರೀಕ್ಷೆಯನ್ನು ವೈದ್ಯರಲ್ಲದ ಬೇರೆ ಯಾರೋ ನಡೆಸಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನೂ ಜಿಲ್ಲಾಧಿಕಾರಿಗಳಿಂದ ತರಿಸಿಕೊಳ್ಳಿ ಮತ್ತು ಎಲ್ಲ ದಾಖಲೆಗಳನ್ನೂ ಸುರಕ್ಷಿತವಾಗಿಡಿ’ ಎಂದು ತಾಕೀತು ಮಾಡಿತು.ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.
ಹೈದರಾಬಾದ್ ಮೂಲದ ಪುಷ್ಕರ್ ರಾವ್ ದಂಪತಿಯ ಉಳಿದ ಮಕ್ಕಳು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು ಅವರಲ್ಲಿ ಪ್ರಳಯ್ ಇಲ್ಲಿ ವಾಸವಿದ್ದ. ಈತ ತನ್ನ ವಿದ್ಯಾಭ್ಯಾಸವನ್ನು ಇಂಗ್ಲೆಂಡಿನಲ್ಲಿ ಪೂರೈಸಿದ್ದ. ಮದುವೆಯೂ ಆಗಿ ಪತ್ನಿ ಜೊತೆ ತಂದೆ ತಾಯಿಯ ಒಟ್ಟಿಗೆ ವಾಸವಿದ್ದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.