ಬೆಂಗಳೂರು: ‘ನಮ್ಮ ಭಾಷೆ ಹಾಗೂ ಪರಂಪರೆಗೆ ಅತ್ಯಂತ ಮಹತ್ವವಿದೆ. ನಾಡಿನ ಶಾಸ್ತ್ರೀಯ ನೃತ್ಯಕ್ಕೆ ವಿಶೇಷ ಗೌರವ ಇರುವುದರಿಂದ ಅದನ್ನು ಜಾಗತಿಕ ನೆಲೆಗಟ್ಟಿಗೆ ಪರಿಚಯಿಸಬೇಕು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಸಲಹೆ ನೀಡಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ‘ದೃಶ್ಯ ಚಿತ್ರಣದಲ್ಲಿ ಕುವೆಂಪು’ ನೃತ್ಯ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
‘ಈ ನಾಡಿನಲ್ಲಿ ನೃತ್ಯ, ಸಂಗೀತ, ಸಾಹಿತ್ಯ ಇರದೇ ಹೋಗಿದ್ದರೆ, ಜನರು ಹುಚ್ಚರಾಗುತ್ತಿದ್ದರು. ಹಾಗಾಗಿಯೇ ಇವೆಲ್ಲ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ’ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥೆ ಪ್ರೊ. ಬಿ.ಎಂ.ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ನಾಗರಾಜ ಶೇರಿಗಾರ್ ಅತಿಥಿಗಳಾಗಿದ್ದರು.