ನವದೆಹಲಿ (ಪಿಟಿಐ): ಶಿವಸೇನಾದೊಂದಿಗೆ ನಮ್ಮ ಗೆಳೆತನ ಉಳಿಯುವ ಭರವಸೆಯಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ ಸರ್ಕಾರಕ್ಕೆ ಎನ್ಸಿಪಿ ನೀಡಿರುವ ಬಾಹ್ಯ ಬೆಂಬಲವನ್ನು ನಾವು ಒಪ್ಪಿಯೂ ಇಲ್ಲ, ನಿರಾಕರಿಸಿಯೂ ಇಲ್ಲ ಎಂದಿದ್ದಾರೆ.
‘ಶಿವಸೇನಾದೊಂದಿಗೆ ನಮ್ಮ ಗೆಳೆತನ ಬಹಳ ಹಳೆಯದು. ಭವಿಷ್ಯದಲ್ಲೂ ಈ ಗೆಳೆತನ ಮುಂದುವರೆಯುವ ಭರವಸೆಯಿದೆ. ನಾವು ಗೆಳೆಯರಾಗೇ ಇರುತ್ತೇವೆ. ಈ ಬಗ್ಗೆ ನಡೆಯುತ್ತಿರುವ ಮಾತುಕತೆಗಳು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದಿರುವ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಅವರು ಮಾತನಾಡಿದರು. ಆರ್ಎಸ್ಎಸ್ ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ವದಂತಿಯನ್ನು ನಿರಾಕರಿಸಿರುವ ಅವರು, ‘25 ವರ್ಷ ಜತೆಯಲ್ಲಿ ಆಡಳಿತ ನಡೆಸಿರುವ ನಾವೇ ಈ ಬಗ್ಗೆ ಚರ್ಚಿಸುತ್ತೇವೆ. ವಿಶ್ವಾಸ ಮತಯಾಚನೆಯ ನಂತರ ಎದುರಿಸಿದಷ್ಟು ಟೀಕೆಗಳನ್ನು, 22 ವರ್ಷದ ನನ್ನ ರಾಜಕೀಯ ಜೀವನದಲ್ಲೂ ಎದುರಿಸಿಲ್ಲ. ಎಂದು ದೇವೇಂದ್ರ ಫಡಣವೀಸ್ ಹೇಳಿದ್ದಾರೆ.