ಶಿವಮೊಗ್ಗ: ‘ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ’ ಎಂದು ಸಚಿವರಾದ ಶಾಮನೂರು ಶಿವಶಂಕರಪ್ಪ, ಕಿಮ್ಮನೆ ರತ್ನಾಕರ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
‘ಸಚಿವ ಸಂಪುಟದಿಂದ ಕೈಬಿಟ್ಟರೂ ಚಿಂತೆಯಿಲ್ಲ. ಯಾವಾಗಲೂ ನನ್ನ ಹೆಲಿಕಾಪ್ಟರ್ ಸಿದ್ಧವಿರುತ್ತದೆ’ ಎಂದು ಶಾಮನೂರು ಶಿವಶಂಕರಪ್ಪ ಸುದ್ದಿಗೋಷ್ಠಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸರ್ಕಾರದ ವಿರುದ್ಧ ಕಾಗೋಡು ತಿಮ್ಮಪ್ಪ ಅವರು ಚಾಟಿ ಬೀಸಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಮನೂರು, ‘ಅವರು ಹಿರಿಯರು, ಮನೆಯ ಯಜಮಾನರ ಕೆಲಸ ಮಾಡಿದ್ದಾರೆ’ ಎಂದರು.
‘ನಾನು ಮಾಡಿದ ಕೆಲಸ ತೃಪ್ತಿ ತಂದಿದೆ. ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ. ಇನ್ನೇನು ಆಕಾಶ ಭೂಮಿಗೆ ಇಳಿಸಲು ಸಾಧ್ಯವೇ?’ ಎಂದು ಕಿಮ್ಮನೆ ಪ್ರಶ್ನಿಸಿದರು. ‘ನಾನು ಸ್ಥಾನ ಕೇಳಿಲ್ಲ. ಸೇರಿಸಿಕೊಳ್ಳುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ’ ಎಂದು ಕಾಗೋಡು ಉತ್ತರಿಸಿದರು.