ಉಡುಪಿ: ಕರ್ನಾಟಕ ವಿದ್ಯುತ್ ನಿಗಮ ಹೊಸಂಗಡಿ ಕೆಪಿಸಿಯ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಾರಾಹಿಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ. ಕಮಲಾಕ್ಷ ಉದ್ಘಾಟಿಸಿದರು.
ಸಮಾಜದ ಮುನ್ನಡೆಗೆ ಮಹಿಳೆಯರ ಕೊಡುಗೆ ಅಪಾರ. ಎಲ್ಲ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಮಹಿಳೆಯರ ಸೇವೆ, ಕೊಡುಗೆ ಸ್ಮರಿಸಲು ಇದು ಉತ್ತಮ ಸಂದರ್ಭ ಎಂದರು. ಬ್ಯಾಂಕ್ ಉದ್ಯೋಗಿ ಪ್ರೇಮಕಲಾ ಡಿ. ಮಲ್ಯ ಮಾತನಾಡಿ, ಮಹಿಳೆ ತನ್ನನ್ನು ಮನೆಗೆ ಮಾತ್ರ ಸೀಮಿತಗೊಳಿಸಿಕೊಳ್ಳದೇ, ಸಾರ್ವಜನಿಕ ರಂಗದಲ್ಲೂ ಮುಂದುವರಿಯುತ್ತಿದ್ದಾಳೆ. ಸಮಾನತೆ ಸಾಧಿಸುವುದರ ಜೊತೆಗೆ ತನ್ನನ್ನು ತಾನು ತಿಳಿದುಕೊಂಡು ಇನ್ನೂ ಪ್ರಬುದ್ಧಳಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ ನಾಯ್ಕ್, ಒತ್ತಡದ ಬದುಕು ಸಾಗಿಸುತ್ತಿರುವ ಮಹಿಳೆಯರಿಗೆ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ವಿವರವಾದ ವೈದ್ಯಕೀಯ ಸಲಹೆ ನೀಡಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ಎಚ್. ಮೋಹನ್, ಸಹಾಯಕ ಪ್ರಧಾನ ಪ್ರಬಂಧಕ ವಿಠ್ಠಲ್ ಉಪಸ್ಥಿತರಿದ್ದರು. ಕಿರಿಯ ಎಂಜಿನಿಯರ್ ರೇಖಾ ತಿಮ್ಮಪ್ಪ ಸ್ವಾಗತಿಸಿದರು, ಸಾವಿತ್ರಿ ಪರಿಚಯಿಸಿದರು, ಸಹಾಯಕ ಶಿಕ್ಷಕಿ ಪರ್ಪೇಚ್ ಡಿಸೋಜ ನಿರೂಪಿಸಿದರು, ಎಂಜಿನಿಯರ್ ಜೆ. ಕಾವ್ಯಶ್ರೀ ವಂದಿಸಿದರು.