ಯಲಹಂಕ: ‘ಪ್ರಪಂಚದ ಎಲ್ಲ ಧರ್ಮಗಳು ಒಳ್ಳೆಯದನ್ನೇ ಬಯಸುತ್ತವೆ. ಹೀಗಾಗಿ ಎಲ್ಲ ಧರ್ಮಗಳ ಉತ್ತಮ ಅಂಶಗಳು ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡು ಧರ್ಮದ ಮಾರ್ಗದಲ್ಲಿ ನಡೆಯಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರಿನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಶಿವಶಕ್ತಿ ಭವನ ಹಾಗೂ ಜ್ಞಾನಾಮೃತ ಭವನ ಉದ್ಘಾಟಿಸಿ ಹಾಗೂ ದಿವ್ಯಪ್ರಕಾಶ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ವಿಶ್ವದಲ್ಲಿರುವ ಎಲ್ಲರೂ ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯಿಂದ ಬಾಳಬೇಕೆಂಬುದು ನಮ್ಮ ಸಂಸ್ಕೃತಿ ಹಾಗೂ ಧರ್ಮದ ತಿರುಳಾಗಿದ್ದು, ಅದರಂತೆ ನಾವು ನಡೆಯಬೇಕು. ಮಾನವನ ಜೀವನದಲ್ಲಿ ಶಾಂತಿಯನ್ನು ಪಡೆಯಬೇಕಾದರೆ ಮಾನಸಿಕವಾಗಿ ಸದೃಢರಾಗಬೇಕು. ಆತ್ಮ ಶುದ್ಧಿಯಾದರೆ ಜೀವನ ಶುದ್ಧಿಯಾಗಲು ಸಾಧ್ಯ ಎಂದರು.
ಬ್ರಹ್ಮಕುಮಾರಿ ವಿವಿ (ಮೌಂಟ್ಅಬು) ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಕೆ.ಮೃತ್ಯುಂಜಯ, ಮೈಸೂರು ಉಪವಲಯದ ನಿರ್ದೇಶಕಿ ಬಿ.ಕೆ.ಲಕ್ಷ್ಮಿ, ಬೆಂಗಳೂರು ನಗರ ಉಪವಲಯದ ನಿರ್ದೇಶಕಿ ಬಿ.ಕೆ.ಪದ್ಮಾ ಇದ್ದರು.