ಬೆಂಗಳೂರು: ‘ಕನ್ನಡ ನಾಡು ಹಾಗೂ ಕನ್ನಡ ಮನಸ್ಸುಗಳನ್ನು ಕಟ್ಟಲು ದುಡಿದ ಅದೆಷ್ಟೊ ಸಾಧಕರನ್ನು ನಾವು ಮರೆತ್ತಿದ್ದೇವೆ. ಅವರ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅಂಥ ಸಾಧಕರನ್ನು ಸ್ಮರಿಸುವ ಕೆಲಸ ನಡೆಯಬೇಕಾಗಿದೆ. ಈ ಮೂಲಕ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬಬೇಕಾಗಿದೆ’ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.
ನಗರದಲ್ಲಿ ಉದಯಭಾನು ಕಲಾಸಂಘ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಸುವರ್ಣ ಪುಸ್ತಕಮಾಲೆ’ಯ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮರೆತು ಹೋಗಿದ್ದ ಹಲವು ಸಾಧಕರನ್ನು ಅಕ್ಷರ ರೂಪದಲ್ಲಿ ಪರಿಚಯಿಸುತ್ತಿರುವ ಉದಯಭಾನು ಕಲಾಸಂಘದ ಕಾರ್ಯ ಶ್ಲಾಘನೀಯ. ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಲೋಕಕ್ಕೆ ಸಂಘ ಉತ್ತಮ ಕೊಡುಗೆ ನೀಡಿದೆ’ ಎಂದರು.
ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ‘ಕಷ್ಟದಲ್ಲಿ ಬೆಳೆದು ಸಾಧನೆ ಮಾಡಿದವರು ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರ ಶ್ರಮ, ಪ್ರಯತ್ನ, ಸಾಧನೆಗೆ ಕಂಡುಕೊಂಡ ಹಾದಿ ಯುವಪೀಳಿಗೆಗೆ ಮಾರ್ಗದರ್ಶನವಾಗಲಿದೆ. ಇಂಥ ಸಾಧಕರ ಕುರಿತ ಪುಸ್ತಕಗಳನ್ನು ಹೊರತರುವ ಮೂಲಕ ಸಂಘವು ಉತ್ತಮ ಕಾರ್ಯದಲ್ಲಿ ತೊಡಗಿದೆ’ ಎಂದು ಹೇಳಿದರು.
‘ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಉದಯಭಾನು ಕಲಾಸಂಘ ಕೈಗೆತ್ತಿಕೊಂಡಿದೆ. ಶಾಸ್ತ್ರೀಯ ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಆರಂಭಿಸಿರುವುದು ಅದಕ್ಕೊಂದು ನಿದರ್ಶನ. ಈ ರೀತಿಯ ಕೋರ್ಸ್ ಎಲ್ಲೂ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇತ್ತ ಕಣ್ಣು ಹರಿಸಬೇಕು’ ಎಂದು ಸಾಹಿತಿ ಡಾ.ಪಿ.ವಿ.ನಾರಾಯಣ ನುಡಿದರು.
ಲೇಖಕರ ಪರವಾಗಿ ಮಾತನಾಡಿದ ಡಾ.ಕೆ.ಸತ್ಯನಾರಾಯಣ, ‘ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಕೈಲಾಶ್ ಸತ್ಯಾರ್ಥಿ ಅವರಿಗೆ ಭಾರತ ಸರ್ಕಾರದಿಂದ ಯಾವುದೇ ಪ್ರಶಸ್ತಿ ಲಭಿಸಿಲ್ಲ. ಶಾಂತಿ ಪುರಸ್ಕಾರಕ್ಕೆ ಭಾಜನರಾದ ಮೇಲೆ ಎಲ್ಲರೂ ಕೈಲಾಶ್ ಅವರನ್ನು ಕೊಂಡಾಡುತ್ತಿದ್ದಾರೆ. ಭಾರತದ ಹೆಮ್ಮೆ ಎನ್ನುತ್ತಿದ್ದಾರೆ. ಸಾಧಕರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಇದೊಂದು ಉದಾಹರಣೆ’ ಎಂದರು.
ಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ, ಅಧ್ಯಕ್ಷ ಬಿ.ಕೃಷ್ಣ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಇದ್ದರು.
ಲೋಕಾರ್ಪಣೆಯಾದ ಕೃತಿಗಳು: ಡಾ.ಬಿ.ಕೆ.ಎಸ್.ಅಯ್ಯಂಗಾರ್ (ಲೇಖಕ: ಡಾ.ಎಸ್.ಎನ್.ಓಂಕಾರ್), ಎಚ್.ವೈ.ಶಾರದಾಪ್ರಸಾದ್ (ಲೇಖಕ: ಡಾ.ಕೆ.ಸತ್ಯನಾರಾಯಣ), ಬೆಳಕಿನ ಮಾಂತ್ರಿಕ ವಿ.ಕೆ.ಮೂರ್ತಿ (ಲೇಖಕ: ಎನ್.ಎಸ್.ಶ್ರೀಧರ ಮೂರ್ತಿ), ಡಾ.ಬಿ.ಎಸ್.ವಿಶ್ವನಾಥ (ಲೇಖಕ: ಎಲೆ ಶಶಿಧರ), ನ.ಭದ್ರಯ್ಯ (ಲೇಖಕ: ಡಾ.ಅರ್ಜುನಪುರಿ ಅಪ್ಪಾಜಿಗೌಡ): ಬೆಲೆ: ₨ 60
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.