ಲಖನೌ: ಶಿರಡಿ ಸಾಯಿ ಬಾಬಾ ಕುರಿತಾಗಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ವಿವಾದಿತ ಹೇಳಿಕೆ ನೀಡಿದ ಬಳಿಕ ಇದೀಗ ಮುಸ್ಲಿಂ ಧರ್ಮಗುರುಗಳು ‘ಬಾಬಾ ಆರಾಧಕರು ಹಮ್ಮಿಕೊಳ್ಳುವ ಸಾಯಿ ಸಂಧ್ಯಾ (ಸಂಜೆಯ ಪ್ರಾರ್ಥನೆ) ಕಾರ್ಯಕ್ರಮದಲ್ಲಿ ಮುಸ್ಲಿಮರು ಭಾಗವಹಿಸಕೂಡದು’ ಎಂದು ಫರ್ಮಾನು ಹೊರಡಿಸಿದ್ದಾರೆ.
‘ಸಾಯಿ ಸಂಧ್ಯಾ ಕಾರ್ಯಕ್ರಮದಲ್ಲಿ ಅಲ್ಲಾಹುವಿನ ಪ್ರಾರ್ಥನೆ ಮಾಡುವುದು ಸೂಕ್ತವಲ್ಲ. ಇದು ಇಸ್ಲಾಂಗೆ ವಿರುದ್ಧವಾದುದು’ ಎಂದು ಉತ್ತರಪ್ರದೇಶದ ದಿಯೋಬಂದ್ನ ದಾರುಲ್ ಉಲೂಂ ಸಂಸ್ಥೆಯ ಹಿರಿಯ ಮೌಲ್ವಿ ಆರಿಫ್ ಕಾಸಿಂ ಹೇಳಿದ್ದಾರೆ. ಕಾಸಿಂ ಅವರ ಅಭಿಪ್ರಾಯಕ್ಕೆ ಇನ್ನೂ ಕೆಲವು ಮೌಲ್ವಿಗಳು ದನಿಗೂಡಿಸಿದ್ದಾರೆ.
ಶಂಕರಾಚಾರ್ಯ ಹೇಳಿಕೆಗೆ ಪ್ರತಿಭಟನೆ: ಶಂಕರಾಚಾರ್ಯ ಅವರ ಹೇಳಿಕೆಯನ್ನು ಖಂಡಿಸಿ ಶಿರಡಿ ಸಾಯಿ ಬಾಬಾ ಅನುಯಾಯಿಗಳು ವಾರಾಣಸಿಯಲ್ಲಿ ಮಂಗಳವಾರ ಧರಣಿ ನಡೆಸಿದರು.
‘ಶಿರಡಿ ಸಾಯಿ ಬಾಬಾ ದೇವರೇ ಅಲ್ಲ. ಹಿಂದೂಗಳು ಅವರನ್ನು ಆರಾಧಿಸಬಾರದು’ ಎಂದು ಶಂಕರಾಚಾರ್ಯ ಹೇಳಿದ್ದರು.
‘ಶಂಕರಾಚಾರ್ಯರ ಹೇಳಿಕೆ ಬಾಬಾ ಅನುಯಾಯಿಗಳಿಗೆ ನೋವು ತಂದಿದೆ’ ಎಂದು ಲಖನೌದ ನಾದೆಸರ್ನಲ್ಲಿರುವ ಸಾಯಿ ಮಂದಿರದ ಉಸ್ತುವಾರಿ ಅಖಿಲೇಶ್ ಸಿಂಗ್ ಹೇಳಿದ್ದಾರೆ.
29ರಂದು ಪ್ರತಿಭಟನೆ: ಶಂಕರಾಚಾರ್ಯ ಹೇಳಿಕೆ ಖಂಡಿಸಿ ಹರಿದ್ವಾರದ ಗಂಗಾ ತಟದಲ್ಲಿರುವ ‘ಹರ್ಕಿ ಪೈಡಿ’ ಘಟ್ಟದಲ್ಲಿ ಸಾಮೂಹಿಕ ಸ್ನಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರಾಖಂಡ ಮೂಲದ ಸಾಯಿ ಕುಟುಂಬ ಸಮಿತಿ ತಿಳಿಸಿದೆ.
ಎಫ್ಐಆರ್ ದಾಖಲು
ಶಿರಡಿ, ಮಹಾರಾಷ್ಟ್ರ (ಪಿಟಿಐ): ಶಿರಡಿ ಸಾಯಿ ಬಾಬಾ ಕುರಿತಾಗಿ ವಿವಾದಿತ ಹೇಳಿಕೆ ನೀಡಿರುವ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಎ) (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದ ಚಿತಾವಣೆ) ಮತ್ತು 298ರ (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರಾಮ್ ಸೂರ್ಯವಂಶಿ ಹೇಳಿದ್ದಾರೆ.
ಸ್ಥಳೀಯರಾದ ನಿತಿನ್ ಕೋಟೆ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.