ಬೆಂಗಳೂರು: ಸಂಗೀತ ವಿದ್ವಾನ್ ಡಾ.ಕೆ.ವರದರಂಗನ್ ಆವಿಷ್ಕರಿ ಸಿರುವ ಸಿಂಥೆಟಿಕ್ ಮೃದಂಗವನ್ನು (ಶ್ರೀ ಮೃದಂಗ) ಕಾರುಣ್ಯ ಸಂಗೀತ ಸಂಸ್ಥೆ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.
ಅನನ್ಯ ಸಂಸ್ಥೆಯ ಅಧ್ಯಕ್ಷ ಆರ್.ವಿ.ರಾಘವೇಂದ್ರ ಮಾತನಾಡಿ, ‘ಸಾಂಪ್ರದಾಯಿಕ ಮೃದಂಗವು ಮರದ ಹೊಳವು ಮತ್ತು ಚರ್ಮದ ಮಚ್ಚಿಗೆಗಳನ್ನು ಹೊಂದಿದ್ದರೆ ಸಿಂಥೆಟಿಕ್ ಮೃದಂಗ ಫೈಬರ್ ಗ್ಲಾಸ್ನಿಂದ ಮಾಡಲ್ಪಟ್ಟಿದೆ. ಸಂಗೀತ ಕ್ಷೇತ್ರದಲ್ಲಿ ಇದೊಂದು ಅತ್ಯುತ್ತಮ ಸೇವೆ’ ಎಂದು ಬಣ್ಣಿಸಿದರು.
ಕೆ.ವರದರಂಗನ್ ಮಾತನಾಡಿ, ‘ಸಾಂಪ್ರದಾಯಿಕ ಮೃದಂಗವು ವಿವಿಧ ಪ್ರಾಣಿಗಳ ಚರ್ಮದಿಂದ ತಯಾರಾಗಿರುತ್ತದೆ. ಸಿಂಥೆಟಿಕ್ ಮೃದಂಗಕ್ಕೆ ಯಾವುದೇ ಪ್ರಾಣಿಗಳ ಚರ್ಮ ಬಳಸಿಲ್ಲ. ಇದೊಂದು ಪ್ರಕೃತಿ ಸ್ನೇಹಿಯಾಗಿದೆ. ಉತ್ತಮ ನಾದ ಹೊರಹೊಮ್ಮುತ್ತದೆ’ ಎಂದು ಮಾಹಿತಿ ನೀಡಿದರು.
ವಿದ್ವಾನ್ ಸಿ.ಚೆಲುವರಾಜ ಹಾಗೂ ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕಿ ಎಸ್. ಸಾಯಿಲಕ್ಷ್ಮೀ ಉಪಸ್ಥಿತರಿದ್ದರು.