ಬೆಂಗಳೂರು: ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಲೆಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಮನಸ್ಥಿತಿ, ಸ್ವಭಾವದ ಬಗ್ಗೆ ತಿಳಿದು ಕೊಳ್ಳಬೇಕಾದ್ದು ಅಗತ್ಯವೆಂದು ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮನೋರೋಗ ಅಥವಾ ಸಂಕುಚಿತ ವ್ಯಕ್ತಿತ್ವದಿಂದಾಗಿ ವಿದ್ಯಾರ್ಥಿನಿಯರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತವೆ ಎಂಬುದು ಮನೋವೈದ್ಯರ ಅಭಿಪ್ರಾಯ. ‘ಈ ರೀತಿಯ ಕೃತ್ಯವನ್ನು ಎಸಗುವವರು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಅವರು ಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಾರೆ. ಅಂಥವರಿಗೆ ದೊಡ್ಡವರ ಜತೆ ಹೀಗೆ ವರ್ತಿಸಲು ಒಂದು ರೀತಿಯ ಭಯವಿರುತ್ತದೆ. ಹೀಗಾಗಿ ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಮಕ್ಕಳು ಇಂತಹ ಕೃತ್ಯಗಳ ಬಗ್ಗೆ ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ ಎಂಬ ಧೈರ್ಯದೊಂದಿಗೆ ಈ ಕೃತ್ಯವನ್ನು ಎಸಗುತ್ತಾರೆ’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮನೋವೈದ್ಯ ಡಾ.ಬಿ.ಕಪೂರ್ ವಿಶ್ಲೇಷಿಸಿದರು. ‘ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ಗಳಿವೆ. ಆ ಮೂಲಕ ಅಶ್ಲೀಲ ಚಿತ್ರಗಳ ವೀಕ್ಷಣೆ ಸುಲಭವಾ ಗುತ್ತಿದೆ. ಇದು ಈಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಮಕ್ಕಳು, ಯುವಕರೆನ್ನದೆ ಎಲ್ಲರೂ ಈ ಚಿತ್ರಗಳನ್ನು ನೋಡುವುದರಿಂದ ವಿಕೃತಿ ಹೆಚ್ಚುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಕುರಿತು ತಿಳಿಸಬೇಕು. ಆಗ ಇಂತಹ ವಿಕೃತಕಾಮಿಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯ’ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಪಿ.ಸತೀಶ್ಚಂದ್ರ ಹೇಳುತ್ತಾರೆ.