ಇತ್ತೀಚೆಗೆ ಅಂಚೆ ಕಚೇರಿಗಳಲ್ಲಿ ‘ಸುಕನ್ಯಾ ಸಮೃದ್ಧಿ ಖಾತೆ’ ಎಂಬ ಅತ್ಯುತ್ತಮ ಉಳಿತಾಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. ವಿದ್ಯಾವಂತರು ಇದರ ಅನುಕೂಲ ಪಡೆಯುವುದು ಅಷ್ಟೇನೂ ಕಷ್ಟವಲ್ಲ. ಆದರೆ, ಗ್ರಾಮೀಣ ಜನರು ಹಾಗೂ ಅವಿದ್ಯಾವಂತ ನಗರವಾಸಿಗಳಿಗೆ ಇದರ ಪ್ರಯೋಜನ ಪಡೆಯುವುದು ಸುಲಭವಲ್ಲ.
ಈ ಉತ್ತಮ ಯೋಜನೆಯನ್ನು ಅರ್ಹರೆಲ್ಲರಿಗೂ ತಲುಪಿಸಿ ಅವರಿಗೆ ಹಾಗೂ ಅಂಚೆ ಕಚೇರಿಗಳಿಗೆ ಲಾಭವಾಗುವಂತೆ, ಅಂಚೆ ಕಚೇರಿಯ ಏಜೆಂಟರ ಮೂಲಕ ಈ ಕೆಲಸವನ್ನು ಮಾಡಿಸಬಹುದು. ಪ್ರತೀ ಖಾತೆಗೆ ಇಂತಿಷ್ಟು ಎಂದು ಪ್ರೋತ್ಸಾಹಧನ ಪ್ರಕಟಿಸಿದರೆ ಅವರೂ ಉತ್ಸಾಹದಿಂದ ತೊಡಗಿಕೊಳ್ಳುವರು. ಈ ಮೂಲಕ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿ.
–ಸುಗುಣ ಜಿ., ಬೆಂಗಳೂರು